ಬರ ಘೋಷಣೆಗೆ ಪೂರಕವಾದ ವರದಿಯನ್ನು ಜಿಲ್ಲಾಡಳಿತ ನೀಡಿದೆ, ಯಾವುದೇ ಅಡ್ಡಿ ಆತಂಕಗಳಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನುಳಿದ ತಾಲೂಕುಗಳೂ ಸಹ ಬರಪೀಡಿತ ಘೋಷಣೆಯಾಗುವುದು ನಿಶ್ಚಿತ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಬರ ಘೋಷಣೆಗೆ ಪೂರಕವಾದ ವರದಿಯನ್ನು ಜಿಲ್ಲಾಡಳಿತ ನೀಡಿದೆ, ಯಾವುದೇ ಅಡ್ಡಿ ಆತಂಕಗಳಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇನ್ನುಳಿದ ತಾಲೂಕುಗಳೂ ಸಹ ಬರಪೀಡಿತ ಘೋಷಣೆಯಾಗುವುದು ನಿಶ್ಚಿತ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದ್ದಾರೆ.

ಶಾಸಕ ತುನ್ನೂರು, ಬರ ಪರಿಸ್ಥಿತಿ ಜಿಲ್ಲೆಯಾದ್ಯಂತ ಆವರಿಸಿದೆ. ಜಿಲ್ಲೆಯ ಶಹಾಪುರ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನುಳಿದ ತಾಲೂಕುಗಳ ಪರಿಸ್ಥಿತಿಯೂ ಭೀಕರವಾಗಿದೆ ಎಂಬ ವಿಷಯವನ್ನು ಕಂದಾಯ ಸಚಿವರೊಂದಿಗೆ ಸುದೀರ್ಘ ಚರ್ಚಿಸಿ, ಮನವರಿಕೆ ಮಾಡಿದ್ದೇನೆ. ಸಚಿವರು ಸ್ಥಳದಿಂದಲೇ ಮೊಬೈಲ್ ಮೂಲಕ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಾಸ್ತವಾಂಶ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಇನ್ನುಳಿದ ತಾಲೂಕುಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಬರ ಘೋಷಣೆಯ ನಿರ್ಧಾರದ ಬಗ್ಗೆ ರೈತರು ಯಾವುದೇ ಆತಂಕ್ಕಕ್ಕೆ ಒಳಗಾಗಬಾರದು. ಕಂದಾಯ ಸಚಿವ ಜಿ.ಪರಮೇಶ್ವರ ಅವರನ್ನು ಖುದ್ದಾಗಿ ತುಮಕೂರಲ್ಲಿ ಭೇಟಿ ಮಾಡಿದ್ದೇನೆ. ಮುಂದಿನ 8-10 ದಿನದಲ್ಲಿ ಬಿಟ್ಟು ಹೋಗಿರುವ ಇನ್ನುಳಿದ ತಾಲೂಕುಗಳನ್ನೂ ಸಹ ಬರ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಕಂದಾಯ ಸಚಿವರಾದ ಜಿ. ಪರಮೇಶ್ವರ ಅವರು ನೀಡಿದ್ದು, ಹಿಂದಿನ ಪಟ್ಟಿಯಲ್ಲಿ ಕೈಬಿಟ್ಟ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಲಿವೆ ಎಂದವರು ತಿಳಿಸಿದ್ದಾರೆ.

ರೈತರ ನೋವು ನಿವಾರಣೆಗೆ ಸರ್ಕಾರ ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬರದ ನೈಜ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ. ಬರದ ವಿಷಯದಲ್ಲೂ ರಾಜಕೀಯ ಮಾಡುವ ವಿಪಕ್ಷದವರ ಟೀಕೆಗಳಿಗೆ ಯಾರು ಕಿವಿಗೊಡಬಾರದು. ಡಿ.ಕೆ.ಶಿವಕಮಾರ ನೇತೃತ್ವದ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಇಂದು ಸಿಎಂ ಅವರೂ ಕೂಡ ಕೆಲವು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಶೀಘ್ರದಲ್ಲೇ ತಮ್ಮ ನಿರ್ಧಾರವನ್ನೂ ಪ್ರಕಟಿಸುತ್ತಾರೆ ಎಂದು ಶಾಸಕ ತುನ್ನೂರು ತಿಳಿಸಿದ್ದಾರೆ.

===ಬಾಕ್ಸ್‌:1====

ಸೆ.21, 22 ಮತ್ತು 23 ರಂದು ವಿಶೇಷ ಅಧಿವೇಶನ

ರಾಜ್ಯದ ರೈತರು ಸಂಕಷ್ಟದಲ್ಲಿರವ ಈ ಸಂದರ್ಭದಲ್ಲಿ ಬರ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗಲಿಲ್ಲ. ಹಾಗಾಗಿ, ಇದೇ ಸೆ.21, 22 ಮತ್ತು 23 ರಂದು ವಿಶೇಷ ಅಧಿವೇಶನ ಕರೆಯಲು ಗುರುವಾರ ನಡೆದ ಸಚಿವ ಸಮಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಶಾಸಕ ತುನ್ನೂರ ಹೇಳಿದ್ದಾರೆ.

-

6ವೈಡಿಆರ್‌4 : ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ, ಯಾದಗಿರಿ ಶಾಸಕರು.