ಬಡವರ ಜಮೀನು ಮೀಸಲು ಅರಣ್ಯವೆಂದು ಘೋಷಣೆ ಆತಂಕಕಾರಿ ಬೆಳವಣಿಗೆ: ಶಾಂತೆಯಂಡ ರವಿ ಕುಶಾಲಪ್ಪ

| Published : Oct 09 2024, 01:32 AM IST

ಬಡವರ ಜಮೀನು ಮೀಸಲು ಅರಣ್ಯವೆಂದು ಘೋಷಣೆ ಆತಂಕಕಾರಿ ಬೆಳವಣಿಗೆ: ಶಾಂತೆಯಂಡ ರವಿ ಕುಶಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ವಿವಿಧೆಡೆ ಸಿ ಮತ್ತು ಡಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಬಡವರ ಜಮೀನುಗಳನ್ನು ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಸುತ್ತೋಲೆ ಹೊರಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.

ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ಸಿ ಮತ್ತು ಡಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿರುವ ಬಡವರ ಜಮೀನುಗಳನ್ನು ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಗ್ರಾ.ಪಂ ಗಳಿಗೆ ಸುತ್ತೋಲೆ ಹೊರಡಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಸರ್ವೆ ನಂಬರ್‌ 55ರ ಒಟ್ಟು ವಿಸ್ತೀರ್ಣ 109.44 (ಹೆಕ್ಟೇರುಗಳಲ್ಲಿ) ಜಮೀನುಗಳನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸುವ ಕುರಿತು ಎಂದು ಅರಣ್ಯ ವ್ಯವಸ್ಥಾಪನಾಧಿಕಾರಿಯಾಗಿರುವ ನಿವೃತ್ತ ಕೆಎಎಸ್‌ ಅಧಿಕಾರಿ ರೇಣುಕಾಂಬ ಅವರು ಮಕ್ಕಂದೂರು ಗ್ರಾ.ಪಂ ಗೆ 2024 ಜುಲೈ 5ಕ್ಕೆ ಸುತ್ತೋಲೆ ಹೊರಡಿಸಿದ್ದಾರೆ. ಇದೇ ರೀತಿಯ ಸುತ್ತೋಲೆ ಜಿಲ್ಲೆಯ ಇನ್ನಿತರ ಗ್ರಾ.ಪಂ ಗಳಿಗೂ ಕಳುಹಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ತಾವು ಹಾಗೂ ಗ್ರಾಮಸ್ಥರು ರೇಣುಕಾಂಬ ಅವರನ್ನು ಮೈಸೂರು ಕಚೇರಿಯಲ್ಲಿ ಭೇಟಿಯಾಗಿರುವುದಾಗಿ ತಿಳಿಸಿದರು.

ಜಮೀನುಗಳ ಪಹಣಿ ಪತ್ರಿಕೆಗಳ ಕಚ್ಚೆದಾರರ ಕಾಲಂನಲ್ಲಿ ಅರಣ್ಯ ಅಂತ ದಾಖಲೆ ಇದ್ದು ಸದರಿ ಜಮೀನುಗಳಲ್ಲಿ ಅನಧಿಕೃತವಾಗಿಯಾಗಲಿ ಅಥವಾ ಅಧಿಕೃತವಾಗಿಯಾಗಲಿ ಸಾರ್ವಜನಿಕರು ಯಾರಾದರು ಜಮೀನುಗಳನ್ನು ಸಾಗು ಮಾಡುತ್ತಿದ್ದಾರೆಯೇ ಹಾಗೂ ಯಾರಿಗಾದರೂ ಮಂಜೂರಾತಿಯಾಗಿದೆಯೇ, 1995 ಡಿ. 2ರ ಪೂರ್ವದಲ್ಲಿ ದರಖಾಸ್ತು ಮೂಲಕ ಜಮೀನು ಮಂಜೂರಾಗಿರುವ ಬಗ್ಗೆ ಮತ್ತು ಸಾರ್ವಜನಿಕ ಅಭಿವೃದ್ಧಿಗಾಗಿ ಜಮೀನನ್ನು ಕಾಯ್ದಿರಿಸಲಾಗಿದೆಯೆ ಎನ್ನುವ ಕುರಿತು ಮಾಹಿತಿ ಅವಶ್ಯವಿದ್ದು ಸ್ಥಾನಿಕವಾಗಿ ಪರಿಶೀಲನೆ ಮಾಡಿ ವರದಿ ನೀಡಲು ಕೋರಲಾಗಿದೆ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ರೇಣುಕಾಂಬ ಅವರು ಸುತ್ತೋಲೆ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹುತೇಕ ಗ್ರಾಮಗಳಲ್ಲಿ ಬಹಿರಂಗವಾಗಿರಲಿಲ್ಲ. ಮಕ್ಕಂದೂರು ಗ್ರಾ.ಪಂ ಗೆ ಬಂದಿರುವ ಸುತ್ತೋಲೆಯನ್ನು ಆಧರಿಸಿ ನಾವು ರೇಣುಕಾಂಬ ಅವರನ್ನು ಭೇಟಿಯಾಗಿ ಜಿಲ್ಲೆಯ ನೈಜ ಸ್ಥಿತಿಗತಿಯನ್ನು ವಿವರಿಸಿದ್ದೇವೆ.

ಸಿ ಮತ್ತು ಡಿ ಭೂಮಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಬಡವರು, ದುರ್ಬಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಆದಿವಾಸಿಗಳು ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಈ ಭೂಮಿ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಅರಣ್ಯ ಇಲಾಖೆಗೆ ಹಿಂದೆ ನಿರ್ವಹಣೆಗಾಗಿ ನೀಡಲಾಗಿತ್ತು ಅಷ್ಟೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಭೂಮಿ ಕುರಿತು ಹಲವು ವರ್ಷಗಳಿಂದ ಗೊಂದಲವಿದೆ. ಜಿಪಿಎಸ್ ಸರ್ವೆ ಬದಲಿಗೆ ಇಲಾಖೆಗಳು ಜಂಟಿಯಾಗಿ ಚೈನ್ ಸರ್ವೆ ನಡೆಸಿದಾಗ ಮಾತ್ರ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ.

ಪೈಸಾರಿ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವವರು ಅಗತ್ಯ ದಾಖಲೆಗಳನ್ನು ಹೊಂದಿದ್ದಾರೆ. ಇದೀಗ ದಿಢೀರ್ ಆಗಿ ಜಮೀನನ್ನು ಅರಣ್ಯವೆಂದು ಘೋಷಿಸುವುದಾಗಿ ಹೊರಡಿಸಲಾದ ಸುತ್ತೋಲೆಯಿಂದ ಗ್ರಾಮೀಣ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಸ್ಥರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಗಳಿಗೆ ಭೇಟಿ ನೀಡಿ ನೈಜತೆಯನ್ನು ಅರಿಯಬೇಕು ಎಂದು ರೇಣುಕಾಂಬ ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ.

ಸುಮಾರು ಒಂದೂವರೆ ಗಂಟೆ ಕಾಲ ನಮ್ಮೊಂದಿಗೆ ಚರ್ಚಿಸಿದ ಅವರು, ಗ್ರಾಮಸ್ಥರು ಖುದ್ದು ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ತಲುಪಿಸಿದರೆ ಗ್ರಾಮಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ರವಿ ಕುಶಾಲಪ್ಪ ತಿಳಿಸಿದರು. ರೇಣುಕಾಂಬ ಅವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಗ್ರಾಮಸ್ಥರು ಶೀಘ್ರ ತಮ್ಮ ಬಳಿ ಇರುವ ದಾಖಲೆಗಳ ಪ್ರತಿಯನ್ನು ಮೈಸೂರು ಕಚೇರಿಗೆ ತಲುಪಿಸಿ ಎಂದು ಮನವಿ ಮಾಡಿದರು.

ರೇಣುಕಾಂಬ ಅವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಗ್ರಾಮಸ್ಥರು ಶೀಘ್ರ ತಮ್ಮ ಬಳಿ ಇರುವ ದಾಖಲೆಗಳ ಪ್ರತಿಯನ್ನು ಮೈಸೂರು ಕಚೇರಿಗೆ ತಲುಪಿಸಿ ಎಂದು ಮನವಿ ಮಾಡಿದರು. ಕೇವಲ ಸೀಮಿತ ಅವಧಿಯಷ್ಟೇ ಉಳಿದಿದ್ದು, ದಾಖಲೆ ನೀಡುವುದು ವಿಳಂಬವಾದರೆ ಜಮೀನು ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು. ಆದ್ದರಿಂದ ಗ್ರಾಮಸ್ಥರು ಒಗ್ಗಟ್ಟಾಗಿ ತಕ್ಷಣ ಎಚ್ಚೆತ್ತುಕೊಳ್ಳಬೇಕು, ಗ್ರಾ.ಪಂ ಗಳು ದಾಖಲೆಗಳನ್ನು ಸಂಗ್ರಹಿಸಿ ರೇಣುಕಾಂಬ ಅವರಿಗೆ ತಲುಪಿಸಿದರೆ ಗ್ರಾಮಸ್ಥರಿಗೆ ಸಹಕಾರಿಯಾಗುತ್ತದೆ ಎಂದರು.

ಹೆಚ್ಚಿನ ಮಾಹಿತಿ ಮತ್ತು ಸಹಕಾರದ ಅಗತ್ಯವಿದ್ದರೆ ಗ್ರಾಮಸ್ಥರು ತಮ್ಮ ಮೊಬೈಲ್ ಸಂಖ್ಯೆ 9448000431, 9480149389 ನ್ನು ಸಂಪರ್ಕಿಸಬಹುದು ಎಂದು ರವಿ ಕುಶಾಲಪ್ಪ ತಿಳಿಸಿದರು.

ಗ್ರಾಮಸ್ಥರಾದ ಬೋಪಯ್ಯ ಎಸ್.ಪಿ, ಸುನಿತಾ ಹಚ್ಚಿನಾಡು, ಲೋಕೇಶ್‌ ಸಿ.ಜಿ ಹಾಗೂ ಅರುಣ್ ಕುಮಾರ್ ಎಂ.ಎಂ ಸುದ್ದಿಗೋಷ್ಠಿಯಲ್ಲಿದ್ದರು.