ಸಾರಾಂಶ
ಚನ್ನಪಟ್ಟಣ: ತಾಲೂಕಿನ ಮಾಕಳಿ ಹೊಸಹಳ್ಳಿ ವರದಾಂಜನೇಯ ಸ್ವಾಮಿ ದೇವಾಲಯ ಲೋಕಾರ್ಪಣಾ ಸಂವತ್ಸರೋತ್ಸವ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರ ಎರಡು ದಿನ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿತು.
ಶನಿವಾರ ನಡೆದ ಸಂವತ್ಸರೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹನುಮ ಜ್ಞಾನ, ವಿವೇಕ, ಲೋಕ ಜ್ಞಾನ, ಪರಮ ಭಕ್ತಿಯ ಸಂಕೇತ. ವರದಾಂಜನೇಯ ಸ್ವಾಮಿ ಪ್ರತಿಷ್ಠಾಪನೆಯ ಸಂವತ್ಸರ ಕಾರ್ಯಕ್ರಮ ಮಾಕಳಿ ಹೊಸಹಳ್ಳಿ ಗ್ರಾಮದಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.ದೇವಾಲಯಗಳೇ ನಿಜವಾದ ನೆಮ್ಮದಿಯ ತಾಣಗಳು. ನಾವು ಮಾಡುವ ಪೂಜೆ ಪುನಸ್ಕಾರ, ಧಾರ್ಮಿಕ ಆಚರಣೆಗಳೇ ನಮ್ಮನ್ನು ನಿಜವಾಗಿಯೂ ರಕ್ಷಿಸುವುದು. ಆದ್ದರಿಂದ ಸಂಪತ್ತು ಗಳಿಕೆಗಷ್ಟೇ ಆದ್ಯತೆ ನೀಡದೇ, ಗಳಿಸಿದ ಸಂಪತ್ತುಗಳನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಭಗವಂತನ ಕೃಪೆಗೆ ಪಾತ್ರವಾಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ದಿ ಜಯನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಬಿ.ಆರ್.ವಾಸುದೇವ್ ಮಾತನಾಡಿ, ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರೂ ಆತ ಮಾಡುವ ಧಾರ್ಮಿಕ ಕೈಂಕರ್ಯ ನೀಡುವ ಶಾಂತಿ ಮತ್ತು ನೆಮ್ಮದಿಯನ್ನು ಬೇರೆ ಯಾವುದು ನೀಡಲು ಸಾಧ್ಯವಿಲ್ಲ. ಧಾರ್ಮಿಕ ಕಾರ್ಯಗಳನ್ನು ನಡೆಸುವ ಜತೆಗೆ ಬಡವರು ಬಲ್ಲಿದರಿಗೆ ನಮ್ಮ ಕೈಲಾದ ನೆರವು ನೀಡಬೇಕು ಎಂದು ಹೇಳಿದರು.ಮಾಕಳಿ ಹೊಸಹಳ್ಳಿಯ ಬಸವೇಶ್ವರ ಸ್ವಾಮಿ, ವರದಾಂಜನೇಯ ಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಶಿವಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ವರದಾಂಜನೇಯ ಸ್ವಾಮಿ ದೇವಾಲಯದ ಇತಿಹಾಸ ಹಾಗೂ ಮಹತ್ವವನ್ನು ತಿಳಿಸಿದರು.
ಇದೇ ವೇಳೆ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವರದಾಂಜನೇಯ ಸ್ವಾಮಿ ಮೂರ್ತಿಗೆ ಬೆಳ್ಳಿ ಕಿರೀಣ ಧಾರಣೆ ಮಾಡಲಾಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ವರದಾಂಜನೇಯ ಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಸುರೇಶ್, ಪದಾಧಿಕಾರಿಗಳಾದ ರಾಮಕೃಷ್ಣಯ್ಯ, ದೇವರಾಜು, ದೇವಲಿಂಗಯ್ಯ, ನಿಂಗೇಗೌಡ, ಬೋರೇಗೌಡ, ರಾಮಲಿಂಗಯ್ಯ, ಪೀಚೇಗೌಡ, ಪುಟ್ಟಲಿಂಗಯ್ಯ, ಮಲ್ಲೇಗೌಡ, ನಾಗೇಶ್, ಗದ್ದೇಗೌಡ, ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ನಾಗವಾರ ಎನ್.ಎಂ.ಶಂಭೂಗೌಡ, ನಿರ್ದೇಶಕ ಹೇಮಂತ್ ಗೌಡ, ನಿವೃತ್ತ ಪೊಲೀಸ್ ರಾಮೇಗೌಡ ಇತರರಿದ್ದರು.ಪೊಟೋ೩ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಮಾಕಳಿ ಹೊಸಹಳ್ಳಿ ವರದಾಂಜನೇಯ ಸ್ವಾಮಿ ದೇವಾಲಯ ಸಂವತ್ಸರೋತ್ಸವ ಕಾರ್ಯಕ್ರಮವನ್ನು ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು.