ಸಾರಾಂಶ
ಸಿಬ್ಬಂದಿ, ಕೊರತೆಯಿಂದಾಗಿ ಇಲಾಖೆ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಒತ್ತಡವಿರುವ ಶಾಖೆಗಳಿಗೆ ಇರುವ ಸಿಬ್ಬಂದಿಯಲ್ಲಿಯೇ ಹೆಚ್ಚಿನಹೊರೆ ಹಂಚಿಕೊಡಲಾಗಿದೆ. ಸಹಜವಾಗಿಯೇ ಕೆಲಸಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದನ್ನು ಇಲ್ಲಿನ ಸಿಬ್ಬಂದಿಯೇ ಒಪ್ಪುತ್ತಾರೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ ಎಂಬ ಕೊರಗಿಗೆ ಕೊನೆಯೇ ಇಲ್ಲದಂತಾಗಿದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ದಿನನಿತ್ಯ ಅಲೆಯುವ ಸಾರ್ವಜನಿಕರು ನಿತ್ಯ ಕಚೇರಿಗೆ ತಪ್ಪದೇ ಅಲೆದಾಟ ನಡೆಸುತ್ತಲೇ ಇದ್ದಾರೆ. ತಾಲೂಕಿನ ಗ್ರಾಮೀಣ ಭಾಗದ ಸಾರ್ವಜನಿಕರು ತಾಲೂಕು ಕಚೇರಿಗೆ ಬಂದು ಸಿಬ್ಬಂದಿಗೆ ಕಾದುಕಾದು ಸುಸ್ತಾಗಿದ್ದಾರೆ. ವಿವಿಧ ಸರ್ಕಾರಿ ಸೌಲಭ್ಯ ಪಡೆಯಲು ಬರುವ ಸಾರ್ವಜನಿಕರು ಸಂಬಂಧಿಸಿದ ನೌಕರರನ್ನು ಭೇಟಿ ಮಾಡಲು ಹೆಣಗಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಅನೇಕ ಯೋಜನೆರೂಪಿಸುತ್ತಿರುವ ಬೆನ್ನಲ್ಲಿ ಅದನ್ನು ಪಡೆಯಬೇಕಾದ ಫಲಾನುಭವಿಗಳು ದಾಖಲೆ ಸಿದ್ಧಪಡಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ.ಸಿಬ್ಬಂದಿ ಕೊರತೆ ನೆಪ ಹೇಳುವ ಕೆಲವು ನೌಕರರಿಗೆ ಸಿಬ್ಬಂದಿ ಕೊರತೆಯ ಕಾರಣ ವರವಾಗಿದೆ. ನಾವು ನಿಮ್ಮ ಒಂದೇ ಕೆಲಸಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ. ನಮಗೆ ಬೇರೆ ಖಾಲಿ ಟೇಬಲ್ಗಳ ಜವಾಬ್ದಾರಿ ಕೂಡ ಇದೆ ಎಂದು ಸಮಜಾಯಿಸಿ ಹೇಳಿ ಕಳುಹಿಸುತ್ತಾರೆ. ಅದಕ್ಕೆ ಪರಿಹಾರಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಯಾವ ವಿಭಾಗದಲ್ಲಿ ಎಷ್ಟು ಸಿಬ್ಬಂದಿ ಕೊರತೆ:ತಾಲೂಕು ಕಚೇರಿಯಲ್ಲಿ ಬರೋಬ್ಬರಿ 13 ಸಿಬ್ಬಂದಿ ಕೊರತೆ ಇದ್ದು, ಮಂಜೂರಾಗಿರುವ ಒಟ್ಟು ಹುದ್ದೆ ಸಂಖ್ಯೆ 74 ಈಗ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ 65, ಶಿರಸ್ತೇದಾರ್ ಒಬ್ಬನೇ ಒಬ್ಬಅಧಿಕಾರಿ ನೇಮಕ ಆಗಿಲ್ಲ. ಗ್ರಾಆಆ (ವೃತ್ತಿಗಳ ಹುದ್ದೆಗಳು) 20 ಹುದ್ದೆಗಳಲ್ಲಿ 15 ಭರ್ತಿಯಾಗಿದೆ. ಕಚೇರಿಗೆ ಆಹಾರ ನಿರೀಕ್ಷಕರ ನೇಮಕವಾಗಿಲ್ಲ. ದ್ವಿತೀಯ ದರ್ಜೆ ಸಹಾಯಕರ (ನಾಡಕಚೇರಿ), ಬೆರಳಚ್ಚುಗಾರ, ಗ್ರೂಪ್ ಡಿ ನೌಕರ 4, ವಾಹನ ಚಾಲಕ 1 ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ.
ಸಿಬ್ಬಂದಿ, ಕೊರತೆಯಿಂದಾಗಿ ಇಲಾಖೆ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಒತ್ತಡವಿರುವ ಶಾಖೆಗಳಿಗೆ ಇರುವ ಸಿಬ್ಬಂದಿಯಲ್ಲಿಯೇ ಹೆಚ್ಚಿನಹೊರೆ ಹಂಚಿಕೊಡಲಾಗಿದೆ. ಸಹಜವಾಗಿಯೇ ಕೆಲಸಗಳು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದನ್ನು ಇಲ್ಲಿನ ಸಿಬ್ಬಂದಿಯೇ ಒಪ್ಪುತ್ತಾರೆ.ಇಷ್ಟರಲ್ಲಿಯೇ ಸಿಬ್ಬಂದಿ ನೇಮಕ ಆಗಬೇಕಿತ್ತು ಆಗಿಲ್ಲ. ವರ್ಗಾವಣೆಗೊಂಡವರನ್ನು ಬಿಡುಗಡೆಗೊಳಿಸಬೇಕು. ಇದು ಕೂಡ ಕಚೇರಿ ಕೆಲಸಕ್ಕೆ ತೊಡಕಾಗಿದೆ. ಇರುವ ಸಿಬ್ಬಂದಿಗೆ ಹೆಚ್ಚಿನ ಹೊರೆ ನೀಡಲಾಗಿದೆ. ಸಾರ್ವಜನಿಕ ಕೆಲಸಗಳಿಗೆ ಸಿಬ್ಬಂದಿ ಕೊರತೆ ತೊಡಕಾಗಿದೆ.- ಶಶಿಕಲಾ ಪಾದಗಟ್ಟಿ ತಹಸೀಲ್ದಾರ್ ಯಡ್ರಾಮಿ