ಪ್ರೊ. ಎಸ್.ವಿ. ಸಂಕನೂರ ಅವರಿಗೆ ಟಿಕೆಟ್ ಘೋಷಿಸಿದ್ದರೂ ಅನೇಕರಿಗೆ ಅಸಮಾಧಾನ ತಂದಿದೆ. ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿದ್ದು ಮತದಾರರ ನೋಂದಣಿ ಕೂಡ ದೊಡ್ಡ ಪ್ರಮಾಣದಲ್ಲಿ ಮಾಡಿಸಿದ್ದೇನೆ. ನನ್ನ ಹಿತೈಷಿಗಳು ಮತ್ತು‌‌ ಬೆಂಬಲಿಗರ ಸಲಹೆಯಂತೆ ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದೇನೆ ಎಂದು ಸುಧೀಂದ್ರ ದೇಶಪಾಂಡೆ ಹೇಳಿದರು.

ಧಾರವಾಡ:

ಪಶ್ಚಿಮ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಬಿಜೆಪಿ ಮುಖಂಡ ಸುಧೀಂದ್ರ ದೇಶಪಾಂಡೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅಂತಿಮಗೊಳಿಸಿದ ಮೂವರಲ್ಲಿ ನನ್ನ ಹೆಸರು ಇತ್ತು. ಆದರೆ, ಕೊನೆ ಘಳಿಗೆಯಲ್ಲಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರಿಂದ ನನಗೆ ಅವಕಾಶ ಸಿಗದಂತಾಯಿತು. ಇದೀಗ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಬಯಸಿದ್ದ ನನಗೆ ಪುನಃ ಟಿಕೆಟ್ ಕೈತಪ್ಪಿದೆ. ಹಲವು ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠೆಯಿಂದ ಶ್ರಮಿಸುತ್ತಿದ್ದ ನನಗೆ ಸೇರಿದಂತೆ ನನ್ನಂತೆ ಟಿಕೆಟ್ ಬಯಸಿದ್ದ ಅನೇಕರಿಗೆ ನಿರಾಸೆ ಆಗಿದೆ ಎಂದರು.

ಪ್ರೊ. ಎಸ್.ವಿ. ಸಂಕನೂರ ಅವರಿಗೆ ಟಿಕೆಟ್ ಘೋಷಿಸಿದ್ದರೂ ಅನೇಕರಿಗೆ ಅಸಮಾಧಾನ ತಂದಿದೆ. ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿದ್ದು ಮತದಾರರ ನೋಂದಣಿ ಕೂಡ ದೊಡ್ಡ ಪ್ರಮಾಣದಲ್ಲಿ ಮಾಡಿಸಿದ್ದೇನೆ. ನನ್ನ ಹಿತೈಷಿಗಳು ಮತ್ತು‌‌ ಬೆಂಬಲಿಗರ ಸಲಹೆಯಂತೆ ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಬಿಜೆಪಿ‌ ಟಿಕೆಟ್ ಬಯಸಿದ್ದ ಡಾ. ಮಹೇಶ ನಾಲವಾಡ ಸೇರಿದಂತೆ ‌ಇನ್ನೂ ಕೆಲವರು ತಮ್ಮನ್ನು‌ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಈ ಎಲ್ಲ‌ ಕಾರಣಗಳಿಂದ ತಾವು ಓರ್ವ ಸ್ಪರ್ಧಿ ಮಾತ್ರ ಆಗಿರದೆ,‌ ಗೆಲ್ಲುವ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಪಕ್ಷದ ಮುಖಂಡರು ಕೂಡ ತಮಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಪದವೀಧರ ಮತದಾರರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು ಅಭ್ಯರ್ಥಿಯಾಗುವುದು‌ ನಿಶ್ಚಿತ ಎಂದರು.

ಬಿಜೆಪಿಯಿಂದ ಒತ್ತಡ ಅಥವಾ ‌ಮನವೊಲಿಸುವ ತಂತ್ರ ನಡೆದರೂ ತಮ್ಮ ನಿರ್ಧಾರ ಅಚಲ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.ನರಸಿಂಹರಾವ ಸೋಮಲಾಪೂರ, ಬಸವರಾಜ ಶಿರಸಂಗಿ ಸುದ್ದಿಗೋಷ್ಠಿಯಲ್ಲಿದ್ದರು.