ಸಾರಾಂಶ
ಕೊಪ್ಪಳದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತ ನಾಯಕ ದೊಡ್ಡಮನಿ ಹಾಗೂ ಉಪನ್ಯಾಸಕರಾದ ಶಿವನಾಥ್ ಇ.ಜಿ. ಅವರಿದ್ದ ನಿಯೋಗವು ಮಹಾವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಪ್ರಾಚಾರ್ಯ ರಾಜಶೇಖರ ಪಾಟೀಲ್ ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪದವಿ ಮಹಾವಿದ್ಯಾಲಯ ಪ್ರಾರಂಭಿಸಲು ಬೇಕಾದ ಮೂಲಸೌಕರ್ಯಗಳು ಲಭ್ಯವಿರುವುದನ್ನು ತೋರಿಸಿ, ಪೂರಕ ಮಾಹಿತಿ ಒದಗಿಸಿದರು.
ಕೊಪ್ಪಳ:
ಭಾಗ್ಯ ನಗರದಲ್ಲಿ ಸರ್ಕಾರಿ ಪದವಿ ಕಾಲೇಜ್ ಸ್ಥಾಪನೆ ಕುರಿತಂತೆ ಇತ್ತೀಚೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಕಾಲೇಜು ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಾಲೇಜು ಪ್ರಾರಂಭಿಸಲು ಬೇಕಾದ ಕನಿಷ್ಠ ಸೌಲಭ್ಯಗಳ ಲಭ್ಯತೆ ಕುರಿತು ಶುಕ್ರವಾರ ಪರಿಶೀಲನೆ ನಡೆಸಿತು.ಕೊಪ್ಪಳದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಹನುಮಂತ ನಾಯಕ ದೊಡ್ಡಮನಿ ಹಾಗೂ ಉಪನ್ಯಾಸಕರಾದ ಶಿವನಾಥ್ ಇ.ಜಿ. ಅವರಿದ್ದ ನಿಯೋಗವು ಮಹಾವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಪ್ರಾಚಾರ್ಯ ರಾಜಶೇಖರ ಪಾಟೀಲ್ ಅವರು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪದವಿ ಮಹಾವಿದ್ಯಾಲಯ ಪ್ರಾರಂಭಿಸಲು ಬೇಕಾದ ಮೂಲಸೌಕರ್ಯಗಳು ಲಭ್ಯವಿರುವುದನ್ನು ತೋರಿಸಿ, ಪೂರಕ ಮಾಹಿತಿ ಒದಗಿಸಿದರು.
ಪದವಿ ಮಹಾವಿದ್ಯಾಲಯದ ಪ್ರಾರಂಭಕ್ಕೆ ಬೇಕಾದ ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆ, ಆಟದ ಮೈದಾನ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಲ್ಲಿ 15 ವರ್ಷಗಳಿಂದ ನಿಷ್ಕ್ರಿಯವಾಗಿರುವ ಪವರ್ ಲೂಮ್ ನೇಕಾರರ ಸಹಕಾರ ಉತ್ಪಾದಕ ಮತ್ತು ಮಾರಾಟ ನಿಯಮಿತ ಸಂಸ್ಥೆಯ ಕಟ್ಟಡ ಬಳಸಿಕೊಳ್ಳಲು ಅವಕಾಶವಿದೆ ಎಂಬುದನ್ನು ಭಾಗ್ಯನಗರ ಸರ್ಕಾರಿ ಪದವಿ ಕಾಲೇಜ್ ಹೋರಾಟ ಸಮಿತಿ ಸಂಚಾಲಕ ಕೃಷ್ಣ ಇಟ್ಟಂಗಿ ನಿಯೋಗದ ಗಮನಕ್ಕೆ ತಂದರು. ಲಭ್ಯವಿರುವ ಸೌಲಭ್ಯಗಳು ಮಹಾವಿದ್ಯಾಲಯ ಪ್ರಾರಂಭಿಸಲು ಸೂಕ್ತವಾಗಿವೆ ಎಂದು ನಿಯೋಗ ತೃಪ್ತಿ ವ್ಯಕ್ತಪಡಿಸಿತು.ಈ ವೇಳೆ ಭಾಗ್ಯನಗರ ಸರ್ಕಾರಿ ಪದವಿ ಕಾಲೇಜ್ ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಪಪಂ ಉಪಾಧ್ಯಕ್ಷ ಹೊನ್ನೂರಸಾಬ್ ಭೈರಾಪುರ, ಶಿವರಾಮ್ ಮೇಗಳಮನಿ, ಪಟ್ಟಣ ಪಂಚಾಯಿತಿ ಸದಸ್ಯ ಮೋಹನ್ ಅರಕಲ್ ಉಪಸ್ಥಿತರಿದ್ದರು. ಆಯುಕ್ತರಿಗೆ ವರದಿ...
ಪರಿಶೀಲನೆ ವರದಿ ಕಲಬುರಗಿಯ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯಾಗಲಿದೆ. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರಿಗೆ ಈ ಕುರಿತು ಸಲ್ಲಿಕೆಯಾಗಿದ್ದ ಮನವಿ ಪುರಸ್ಕರಿಸಿ ಸೂಕ್ತ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ನಿಯೋಗ ಆಗಮಿಸಿತ್ತು ಎಂದು ಸಂಚಾಲಕ ಕೃಷ್ಣ ಇಟ್ಟಂಗಿ ಹರ್ಷ ವ್ಯಕ್ತಪಡಿಸಿದ್ದು, ಸೂಕ್ತ ಸಹಕಾರ ನೀಡುತ್ತಿರುವ ಜನಪ್ರತಿನಿಧಿಗಳಿಗೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.