ನಿವೇಶನ ಮಂಜೂರು ವಿಚಾರದಲ್ಲಿ ವಿಳಂಬ ನೀತಿ: ಮಲ್ಲೇಶಪ್ಪ ಚಿಕ್ಕಣ್ಣನವರ

| Published : Apr 27 2025, 01:51 AM IST

ನಿವೇಶನ ಮಂಜೂರು ವಿಚಾರದಲ್ಲಿ ವಿಳಂಬ ನೀತಿ: ಮಲ್ಲೇಶಪ್ಪ ಚಿಕ್ಕಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟಿಗಟ್ಟಲೇ ಅನುದಾನ ವ್ಯಯಿಸಿ ಖರೀದಿಸಿ 8 ವರ್ಷ ಗತಿಸಿದೆ, ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ

ಬ್ಯಾಡಗಿ: ಪಟ್ಟಣದ ಅರ್ಹ ಬಡವರಿಗೆ ಪುರಸಭೆಯಿಂದ ನಿವೇಶನ ಮಂಜೂರು ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು, 2012ರಲ್ಲಿ ಪಟ್ಟಣದ ಕೆಲ ಬಡವರಿಗೆ ನಿವೇಶನ ಹಂಚಿಕೆ ನಡೆದಿದ್ದು, ಬಳಿಕ 12 ವರ್ಷಗಳು ಗತಿಸಿದರೂ ಒಂದು ಕುಟುಂಬಕ್ಕೂ ನಿವೇಶನ ಹಂಚಿಕೆ ಸಾಧ್ಯವಾಗಿಲ್ಲ, ಒಟ್ಟು 814 ಜನ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆಯ್ಕೆಪಟ್ಟಿ ಸಿದ್ದಗೊಳಿಸಿದ್ದರು, ಆದರೆ ಈವರೆಗೂ ಅರ್ಹ ಬಡವರಿಗೆ ಹಕ್ಕು ಪತ್ರ ಹಂಚಿಕೆ ವಿಳಂಬವಾಗಿದೆ, ಬಡವರು ನಿವೇಶನ ಅಥವಾ ಮನೆಯಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ, ನೂರಾರು ಬಡ ಕುಟುಂಬಗಳಿಗೆ ನ್ಯಾಯ ಸಿಗದಂತಾಗಿದ್ದು, ಕೂಡಲೇ ಸ್ಥಳೀಯ ಆಶ್ರಯ ಸಮಿತಿ ಸದಸ್ಯರು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿದರು.

ಮಾತಿಗೆ ತಪ್ಪಬೇಡಿ:ಈ ಹಿಂದೆ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿದ ವೇಳೆ ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾ ಎರೇಶೀಮಿ ಹಾಗೂ ಸರ್ವ ಸಮಿತಿ ಸದಸ್ಯರು ಏಪ್ರಿಲ್ ಮೊದಲ ವಾರದಲ್ಲಿ ಅರ್ಹ ಬಡವರನ್ನು ಆಯ್ಕೆಗೊಳಿಸಿ ಅವರಿಗೆ ಹಕ್ಕು ಪತ್ರ ವಿತರಿಸುವುದಾಗಿ ಹೇಳಿಕೆ ನೀಡಿದ್ದರು, ಆದರೆ ಈವರೆಗೂ ಹಕ್ಕು ಪತ್ರ ನೀಡಲು ಸಮಿತಿ ಮುಂದಾಗಿಲ್ಲ, ಕೋಟಿಗಟ್ಟಲೇ ಅನುದಾನ ವ್ಯಯಿಸಿ ಖರೀದಿಸಿ 8 ವರ್ಷ ಗತಿಸಿದೆ, ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ, ಕಳೆದ 4 ವರ್ಷದ ಹಿಂದೆ ಮನೆ ನೀಡುವುದಾಗಿ ಬಡವರಿಂದ ತಲಾ ₹30 ಸಾವಿರ ತುಂಬಿಸಿಕೊಂಡಿದೆ. ರಾಜೀವ ಗಾಂಧಿ ವಸತಿ ನಿಗಮದ ಆದೇಶವಿಲ್ಲದೇ ಕಾನೂನು ಬಾಹೀರವಾಗಿ ಹಣ ತುಂಬಿಸಿ ಕೊಳ್ಳಲಾಗಿದೆ, ಇದನ್ನು ಪ್ರಶ್ನಿಸಿ ರಾಜ್ಯಪಾಲರಿಗೆ ಪತ್ರ ಬರೆಯುವೆ, ಈಗ ಬಡವರಿಗೆ ಹಣವೂ ಇಲ್ಲ,ನಿವೇಶನವೂ ಇಲ್ಲ ಎನ್ನುವಂತಾಗಿದೆ, ಕೂಡಲೇ ಬಡವರಿಂದ ಪಡೆದ ₹30 ಸಾವಿರ ಹಣ ವಾಪಸ್‌ ಅವರ ಖಾತೆಗೆ ಹಿಂತಿರುಗಿಸಿ ಅರ್ಹರಿಗೆ ನಿವೇಶನ ವಿತರಿಸಬೇಕು, ಒಂದು ವೇಳೆ ನಿರ್ಲಕ್ಷಿಸಿದರೆ ಪುರಸಭೆ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.