ಸಾರಾಂಶ
ಕೊಳ್ಳೇಗಾಲ ನಗರಸಭೆ ಸಕಾಲದ್ಲಲಿ ಎ ಖಾತೆ, ಬಿ ಖಾತೆ ನೀಡುತ್ತಿಲ್ಲ ಎಂದು ಆರೋಪಿಸಿ ಕೆಆರ್ಎಸ್ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆಯಲ್ಲಿ ಎ ಖಾತಾ ಮತ್ತು ಬಿ ಖಾತಾ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಕಚೇರಿ ಮುಂಭಾಗದಲ್ಲಿ ಕೆಆರ್ಎಸ್ ಪಕ್ಷದ ಮುಖಂಡರು ವಿಳಂಬ ನೀತಿಗೆ ಧಿಕ್ಕಾರ ಕೂಗುವ ಮೂಲಕ ಶುಕ್ರವಾರ ಕೆಲಕಾಲ ಪ್ರತಿಭಟಿಸಿ ಸ್ಥಳದಲ್ಲೆ ಭಾಗ್ಯ ಎಂಬುವರಿಗೆ ಇ-ಸ್ವತ್ತು ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟ ಘಟನೆ ಜರುಗಿತು.ಕೆಆರ್ಎಸ್ ಪಕ್ಷದ ಕಾರ್ಯಕರ್ತರು ನಗರಸಭೆ ಸಕಾಲದಲ್ಲಿ ಖಾತೆ ನೀಡುತ್ತಿಲ್ಲ, ವಿಳಂಬ ನೀತಿ ಹಾಗೂ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು
ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ , ಸಾರ್ವಜನಿಕರಿಗೆ ಖಾತೆಯನ್ನು ಮೂರು ತಿಂಗಳ ಅವಧಿಯೊಳಗೆ ಖಾತೆ ಮಾಡಬೇಕು ಎಂಬ ನಿಯಮವಿದ್ದರೂ ಕೂಡ, ಅಧಿಕಾರಿಗಳು ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬಿಸುತ್ತಿದ್ದಾರೆ. ಪ್ರತಿದಿನವೂ ಜನರು ನಗರಸಭೆಗೆ ಅಲೆದಾಡುತ್ತಿದ್ದು, ಇದರಿಂದಾಗಿ ಅಸಮಾಧಾನ ಹೆಚ್ಚಾಗಿದೆ. ಅಧಿಕಾರಿಗಳಿಗೆ ಈ ಸಂಬಂಧ ಸಮರ್ಪಕ ಮಾಹಿತಿ ಇಲ್ಲವೆಂಬುದೂ ಚಿಂತಾಜನಕ ವಿಷಯವಾಗಿದೆ, ಅಲ್ಲದೆ ಭಾಗ್ಯ ಎಂಬುವರನ್ನು ಇ-ಸ್ವತ್ತು ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.ಅಧಿಕಾರಿಗಳು ಕೂಡಲೆ ಭಾಗ್ಯ ಎಂಬುವರು ಇ-ಸ್ವತ್ತಿಗೆ ಕಂದಾಯ ಪಾವತಿಸಿಕೊಂಡು ಸ್ಥಳದಲ್ಲೆ ಇ-ಸ್ವತ್ತು ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟರು. ಕೆಆರ್ಎಸ್ ಪಕ್ಷದ ತಾಲೂಕು ಅಧ್ಯಕ್ಷ ನವೀನ್, ಜಿಲ್ಲಾ ಕಾರ್ಯದರ್ಶಿ ಮಧು ನಾಯಕ್, ಜಿಲ್ಲಾ ಕಾರ್ಯದರ್ಶಿ ಜಯಶಂಕರ್, ಶಿವಶಂಕರ್, ತಾಲೂಕು ಕಾರ್ಯದರ್ಶಿ ಕುಮಾರ್, ಚಂದ್ರಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಇನ್ನಿತರರಿದ್ದರು.