ಸಾರಾಂಶ
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲಮನ್ನಾ ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ. 26ರಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಹೋರಾಟ ನಡೆಯುತ್ತಿದ್ದರು ಕೇಂದ್ರಸರ್ಕಾರ ಬೇಡಿಕೆ ಈಡೇರಿಸಿಲ್ಲ.
ಧಾರವಾಡ:
ದೆಹಲಿ ರೈತ ಹೋರಾಟದ ವಾಪಸ್ಸಾತಿ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆ ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಕುಳಿತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ ಅವರ ಪ್ರಾಣ ಉಳಿಸಲು ತಕ್ಷಣ ಪ್ರಧಾನಿ, ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕೆಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ, ಸಾಲಮನ್ನಾ ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ. 26ರಿಂದ ಪಂಜಾಬ್-ಹರ್ಯಾಣ ಗಡಿಯಲ್ಲಿ ಜಗಜಿತ್ ಸಿಂಗ್ ದಲ್ಲೇವಾಲ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಈ ಉಪವಾಸ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು ದೇಹ ನಿತ್ರಾಣಗೊಂಡಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವಂತಹ ಸನ್ನಿವೇಶವಿದೆ. ಇಂತಹ ಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಜನಸಂಗ್ರಾಮ ಪರಿಷತ್ನ ಎಸ್.ಆರ್. ಹಿರೇಮಠ, ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ, ರೈತ ಸಂಘದ ರವಿರಾಜ ಕಂಬಳಿ, ನಾಗಪ್ಪ ಉಂಡಿ, ಈರಣ್ಣ ಬಳಗೇರ, ದಲಿತ ಸಂಘಟನೆ ಮುಖಂಡರಾದ ಲಕ್ಷ್ಮಣ ದೊಡಮನಿ, ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಗಂಗಾಧರ ಬಡೆಗೇರ, ಭುವನಾ, ಸಿಐಟಿಯುನ ಬಿ.ಐ. ಈಳಗೇರ, ಲಕ್ಷ್ಮಣ ಜಡಗನ್ನವರ, ಹನುಮೇಶ ಹುಡೇದ, ಶರಣು ಗೋನವಾರ, ನಾರಾಯಣ ಮಾದರ, ಹನುಮಂತು ಮೊರಬ, ರವಿವಡ್ಡರ, ಐಐಕೆಕೆಎಂಎಸ್ನ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಸೇರಿದಂತೆ ಇತರರು ಇದ್ದರು.