ಸಾರಾಂಶ
ಅರಕಲಗೂಡು: ಕಾರ್ಮಿಕ ವರ್ಗದವರಿಗೆ ಸರ್ಕಾರದ ಸವಲತ್ತುಗಳು ವಿಫುಲವಾಗಿದ್ದು ಅಧಿಕಾರಿಗಳು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಎ. ಮಂಜು ತಾಕೀತು ಮಾಡಿದರು. ಪಟ್ಟಣದ ದೇವರಾಜ ಅರಸು ಭವನದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ವರ್ಗದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆಗಳ ಹಾಗೂ ಕಾರ್ಮಿಕ ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಏಳು ಸಾವಿರಕ್ಕಿಂತ ಅಧಿಕ ಕಾರ್ಮಿಕರಿದ್ದು ಸರ್ಕಾರದ ಸವಲತ್ತುಗಳು ಈ ಕಾರ್ಮಿಕರಿಗೆ ತಲುಪಬೇಕು. ಸೌಕರ್ಯಗಳನ್ನು ಪಡೆದುಕೊಂಡವರು ಇತರರಿಗೂ ಮಾಹಿತಿ ನೀಡಬೇಕು. ಸೌಲಭ್ಯಗಳಿಂದ ವಂಚಿತರಾದವರನ್ನು ಅಧಿಕಾರಿಗಳು ಗುರುತಿಸಿ ಒದಗಿಸಬೇಕು ಎಂದರು. ರೈತರು ಇಂದು ಐದು ಎಕರೆಯಷ್ಟು ತೋಟ ಹೊಂದಿದ್ದರೂ ಅವರ ಗಂಡು ಮಕ್ಕಳಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ. ದುಡಿಯುವ ಕಾರ್ಮಿಕ ವರ್ಗದವರಿಗೆ ಆರ್ಥಿಕವಾಗಿ ಸಬಲರಾಗುವ ಶಕ್ತಿ ಇದೆ. ಹೀಗಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಯಮುನಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಬಿ. ಉಳ್ಳಾಗಡ್ಡಿ, ಹಿರಿಯ ಕಾರ್ಮಿಕ ನಿರೀಕ್ಷಕ ಎಸ್. ವಿಜಯ್ ಕುಮಾರ್, ಕಾರ್ಮಿಕ ನಿರೀಕ್ಷಕ ಎಚ್.ಪಿ. ರಘು ಇದ್ದರು.