ಸರ್ಕಾರದ ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಿಸಿ

| Published : Jul 11 2024, 01:39 AM IST

ಸಾರಾಂಶ

ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು

ಗಜೇಂದ್ರಗಡ: ಸರ್ಕಾರದ ಮಹತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಶರಣಪ್ಪ ಬೆಟಗೇರಿ ಹೇಳಿದರು.

ಪಟ್ಟಣದ ತಾಪಂ ಚಿಂತನ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ನಮ್ಮ ಸಮಾಜದಲ್ಲಿ ಇನ್ನು ಅನೇಕರು ಪ್ರಮುಖ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.ಆ ನಿಟ್ಟಿನಲ್ಲಿ ನಾವು ನೀವುಗಳು ಒಂದಾಗಿ ಕೆಲಸ ಮಾಡುವ ಮೂಲಕ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡೋಣ ಎಂದರು.

ಸಾರಿಗೆ ಇಲಾಖೆ:ತಾಲೂಕಿನಲ್ಲಿ ಸಾರಿಗೆ ಇಲಾಖೆಯ ಬಸ್‌ನಲ್ಲಿ ಜೂನ್ ೨೦೨೩ ರಿಂದ ಜೂನ್ ೨೦೨೪ ರವರೆಗೆ ಮಹಿಳೆಯರು ೭೪೨೩೭೪೭ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪುರುಷರು ೧೦೨೮೦೩೮೦ ಜನರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಸಾರಿಗೆ ವ್ಯವಸ್ಥಾಪಕರು ತಿಳಿಸಿದರು.

ಇದಕ್ಕೆ ಬೆಣಚಮಟ್ಟಿ,ನಾಗೇಂದ್ರಗಡ, ಮಾಟರಂಗಿ, ನಾಗರಸಕೊಪ್ಪ ಬಸ್ ಕೊರತೆ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಗದಗನಿಂದ ಗಜೇಂದ್ರಗಡಕ್ಕೆ ಸಂಜೆ ಸಮಯದಲ್ಲಿ ಬಸ್ ಇರುವುದಿಲ್ಲ. ಮಹಿಳೆಯರಿಗೆ, ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ಸರಿಯಾಗಿ ನಿಲ್ಲಿಸುವುದಿಲ್ಲ ಎಂದು ಕೆಲ ಸದಸ್ಯರು ಆರೋಪಿಸುವುದರ ಜತೆಗೆ ತಾಲೂಕಿಗೆ ೧೦ ಬಸ್ ಹೆಚ್ಚುವರಿ ಬೇಡಿಕೆ, ಬಸ್ ನಿಲ್ದಾಣದ ಸುತ್ತ ಸ್ವಚ್ಛತೆ ಕಾಪಾಡುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಗೃಹಲಕ್ಷ್ಮೀ ಯೋಜನೆ: ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆ ಗುರಿ ೩೦೧೨೯ ಇದ್ದು, ೩೦೧೨೯ ಸಾಧನೆ ಮಾಡಿದೆ ಎಂದು ಸಭೆ ಮಾಹಿತಿ ನೀಡುತ್ತಿದ್ದಂತೆ ಸದಸ್ಯರು ಕಳೆದ ಹತ್ತು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಹಳಷ್ಟು ಜನರಿಗೆ ಹಣ ಜಮಾ ಆಗಿಲ್ಲ ಎಂದು ದೂರುಗಳು ಬರುತ್ತಿವೆ. ಆ ಬಗ್ಗೆ ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಸದಸ್ಯೆ ಪ್ರೇಮಾ ಇಟಗಿ ತಿಳಿಸಿದರು.

ತಹಸೀಲ್ದಾರ್ ಕಿರಣಕುಮಾರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಮಸ್ಯೆಗಳ ಬಗ್ಗೆ ಸರ್ವ ಸದಸ್ಯರ ಒಮ್ಮತದ ಮೇರೆಗೆ ಪುರಸಭೆಯಲ್ಲಿ ಒಂದು ಪ್ರತ್ಯೇಕ ಕೌಂಟರ್ ತೆಗೆದು ಗ್ರಾಪಂವಾರು ಸಮಸ್ಯೆಗಳ ಪಟ್ಟಿ ತಂದು ನೀವೇ ಬಗೆಹರಿಸಿಕೊಂಡು ಹೋಗಲು ಸದಸ್ಯರಿಗೆ ಸೂಚಿಸಿದರು.

ಅನ್ನಭಾಗ್ಯ ಯೋಜನೆ: ಹೊಸ ರೇಷನ್ ಕಾರ್ಡ್ ಅವಕಾಶವಿಲ್ಲ. ಹೊಸ ಸೇರ್ಪಡೆ, ಸರ್ವರ ಸಮಸ್ಯೆ, ಇಕೆವೈಸಿ, ಆಧಾರ ಸಿಡಿಂಗ್ ಬಗ್ಗೆ ಮಾಹಿತಿ ನೀಡಿದರು. ರೇಷನ್ ಕಾರ್ಡ್ ಹೊಂಡಿರುವ ಫಲಾನುಭವಿಗಳಿಗೆ ಮೆಡಿಕಲ್ ಕಾರ್ಡಗಾಗಿ ಅರ್ಜಿ ಸಲ್ಲಿಸಿದರೆ ಮಾನವಿಯತೆಯ ದೃಷ್ಠಿಯಿಂದ ಅವರಿಗೆ ತುರ್ತಾಗಿ ಮೆಡಿಕಲ್ ಕಾರ್ಡ್ ನೀಡುವಂತೆ ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.

ಗೃಹಜ್ಯೋತಿ: ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ಎಇಇ ಹೆಸ್ಕಾಂ ವೀರೇಶ ರಾಜೂರ ಸಭೆಗೆ ತಿಳಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ ಬಸವರಾಜ ಬಡಿಗೇರ್ ಸಭೆ ನಡೆಸಿಕೊಟ್ಟರು.

ಈ ವೇಳೆ ಮಲ್ಲಿಕಾರ್ಜುನ ಗಾರಗಿ, ಇಮಾಮಸಾಬ ಬಾಗವಾನ, ಶರಣಯ್ಯ ಕಾರಡಗಿಮಠ, ಭೀಮಪ್ಪ ಮೇಟಿ, ಅಲ್ಲಾಸಾಬ ಮುಜಾವರ, ಯಮನೂರಪ್ಪ ತಳವಾರ, ಬಸವರಾಜ ಬಿದರೂರ, ಸದಾಶಿವ ಆಚಲಕರ, ಯಲ್ಲಪ್ಪ ಕುದರಿ, ನಿಂಗಪ್ಪ ಹಂಡಿ, ರಾಜೇಶ್ವರಿ ಕಾಲವಾಡಮಠ, ಶರಣಪ್ಪ ಸಜ್ಜನ, ಗ್ಯಾರಂಟಿ ಯೋಜನೆಯ ಐದು ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಗೊಳಿಸಲು ಶಾಸಕರ ನೇತೃತ್ವದಲ್ಲಿ ಗ್ಯಾರಂಟಿ ಸಮಿತಿಯ ೧೫ ಸದಸ್ಯರು ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಯೋಜನೆಗಳ ಪ್ರತಿಯೊಬ್ಬರಿಗೂ ತಲುಪಿಸುವ ಪ್ರಮಾಣಿಕ ಕೆಲಸ ಮಾಡೋಣ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷರು ಶರಣಪ್ಪ ಬೆಟಗೇರಿ ಹೇಳಿದರು.