ಸಾರಾಂಶ
ವಿಜಯಪುರ:ಇಲ್ಲಿನ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಇ-ಖಾತಾ ಆಂದೋಲನದಡಿಯಲ್ಲಿ ಅರ್ಜಿದಾರರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುರಳೀಧರ್ ಅವರು ಇ-ಖಾತಾ ಪ್ರತಿಗಳನ್ನು ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ಅವರು, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಲ್ಲಿ, ಗ್ರಾಮಠಾಣೆಯ ವ್ಯಾಪ್ತಿಯಲ್ಲಿರುವ ಸ್ವತ್ತುಗಳಿಗೆ ಇ-ಖಾತೆ ಮಾಡಿಸಿಕೊಳ್ಳುವಂತೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೇವೆ. ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ನಾವೆಲ್ಲರೂ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಇ-ಖಾತೆಗಳನ್ನು ವಿತರಣೆ ಮಾಡಿದ್ದೇವೆ. ಇದರಿಂದ ಸಾರ್ವಜನಿಕರು, ಗ್ರಾಮ ಪಂಚಾಯಿತಿಗೆ ಅಲೆದಾಡುವುದು ತಪ್ಪಿದೆ. ಅವರವರ ಸ್ವತ್ತುಗಳನ್ನು ಭದ್ರಪಡಿಸಿಕೊಳ್ಳುವುದಕ್ಕೂ ಅನುಕೂಲವಾಗಿದೆಎಂದರು.ತಾಲೂಕು ಪಂಚಾಯಿತಿ ಇಒ ಶ್ರೀನಾಥ್ ಗೌಡ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ, ಇ-ಖಾತಾ ಆಂದೋಲನ ಮಾಡುತ್ತಿದ್ದೇವೆ. ಶೇ. 80ರಷ್ಟು ಖಾತೆಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ವಿತರಣೆ ಮಾಡುವಂತಹ ಕಾರ್ಯವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ, ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲೂ ಸಂಪನ್ಮೂಲ ಕ್ರೋಢೀಕರಣಕ್ಕೆ ಅನುಕೂಲವಾಗಿದೆ ಎಂದರು.ಗ್ರಾಪಂ ಪ್ರಭಾರ ಪಿಡಿಓ ಆರ್.ಜಿ.ಸೌಮ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಠಾಣೆಯಲ್ಲಿದ್ದ ಆಸ್ತಿಗಳನ್ನು ಬಹುತೇಕ ಇ-ಖಾತೆ ಮಾಡಿದ್ದೇವೆ. ಕೆಲವು ಆಸ್ತಿಗಳನ್ನು ಬಫರ್ ಜೋನ್ ಗೆ ಕಳುಹಿಸಿದ್ದೇವೆ. ಕೆಲವು ತಕರಾರು ಇರುವ ಆಸ್ತಿಗಳನ್ನು ಖಾತೆ ಮಾಡಿಲ್ಲ, ತಕರಾರು ಬಗೆಹರಿಸಿಕೊಂಡು ಬಂದರೆ, ಖಾತೆ ಮಾಡಿಕೊಡಲಾಗುತ್ತದೆ.ಶೇ. 80ರಷ್ಟು ವಿಲೇವಾರಿ ಮಾಡಿದ್ದೇವೆ. ಬಫರ್ ಜೋನ್ನಿಂದ ಕ್ಲಿಯರ್ ಆಗಿ ಬಂದರೆ, ಶೇ. 100ರಷ್ಟು ವಿಲೇವಾರಿಯಾಗುತ್ತವೆ ಎಂದರು. ಗ್ರಾಪಂ ಸದಸ್ಯೆ ಕೋಮಲ ಬಸವರಾಜ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.