ಡಿ ಗ್ರೂಪ್‌ ನೌಕರರ ನೇಮಕಕ್ಕೆ ಒತ್ತಾಯ

| Published : Jun 14 2025, 01:39 AM IST / Updated: Jun 14 2025, 01:40 AM IST

ಸಾರಾಂಶ

ಸರ್ಕಾರಿ ಶಾಲೆಗಳಿಗೆ ಡಿ.ಗ್ರೂಪ್ ನೌಕರರನ್ನು ನೇಮಿಸುವಂತೆ ಕರುನಾಡ ವಿಜಯ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸರ್ಕಾರಿ ಶಾಲೆಗಳಲ್ಲಿ ಡಿ.ಗ್ರೂಪ್ ನೌಕರರಿಲ್ಲದ ಕಾರಣ ಶಿಕ್ಷಕರೇ ಕಸ ಗುಡಿಸುವ, ಶೌಚಾಲಯ

ಸ್ವಚ್ಛಗೊಳಿಸುತ್ತಿರುವುದು ಅತ್ಯಂತ ಹೇಯವಾದುದು, ಸರ್ಕಾರ ಈ ಕೂಡಲೆ ಸರ್ಕಾರಿ ಶಾಲೆಗಳಿಗೆ ಡಿ.ಗ್ರೂಪ್ ನೌಕರರನ್ನು ನೇಮಿಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಮೂಲಭೂತ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಶೌಚಾಲಯ ಶುಚಿಗೊಳಿಸುವವರಿಲ್ಲದೆ ಮಕ್ಕಳು ಸೇರಿ ಶಿಕ್ಷಕರು ಸ್ಚಚ್ಛಗೊಳಿಸುವಂತಾಗಿದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡಬೇಕೆ ಅಥವಾ ಶಾಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆ ಎನ್ನುವುದೇ ಗೊಂದಲವಾಗಿದೆ. ಅನೇಕ ಶಾಲೆಗಳಿಗೆ ಕಾಂಪೌಂಡ್‍ಗಳೆ ಇಲ್ಲ. ಇದರಿಂದ ಮಕ್ಕಳಿಗೆ ಸುರಕ್ಷತೆ ಎನ್ನುವುದು ಮರೀಚಿಕೆಯಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದರು. ರಾಮನಗರದ ತುರುಪಲಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಚಿಗೊಳಿಸುತ್ತಿದ್ದ ಶಿಕ್ಷಕನನ್ನು, ಅಮಾನತ್ತು ಪಡಿಸಲಾಗಿದೆ. ಡಿ.ಗ್ರೂಪ್ ನೌಕರ ಇಲ್ಲದ ಕಾರಣಕ್ಕೆ ಅನಿವಾರ್ಯವಾಗಿ ಶಿಕ್ಷಕರೆ ಸ್ವಚ್ಚಗೊಳಿಸಬೇಕು. ಹಾಗಾಗಿ ಅಮಾನತ್ತನ್ನು ಕೂಡಲೆ ಹಿಂದಕ್ಕೆ ಪಡೆಯಬೇಕು ಒತ್ತಾಯಿಸಿದರು. ಪ್ರತಿಭಟನೆಯ ನಂತರ ಕೆ.ಟಿ.ಶಿವಕುಮಾರ್ ಶೌಚಾಲಯವೊಂದನ್ನು ಶುಚಿಗೊಳಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಅಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಜಗದೀಶ್, ರತ್ನಮ್ಮ, ಹರೀಶ್‍ಕುಮಾರ್, ಮುಜಾಹಿದ್, ನಾಗೇಶ್, ಶಶಿಧರ್, ಅಖಿಲೇಶ್, ವಿಜಯಬಾಬು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.