ಸಾರಾಂಶ
ಜ.17 ರಂದು ಸಂಜೆ ಮನೆಗೆ ತೆರಳುತ್ತಿದ್ದ ಪರಿಶಿಷ್ಟ ವಿದ್ಯಾರ್ಥಿನಿಯೊಬ್ಬಳನ್ನು ನಾಲ್ವರು ಯುವಕರು ಅಪಹರಣ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರ ಸಹಕಾರದಿಂದ ವಿದ್ಯಾರ್ಥಿನಿ ಸಂಕಷ್ಟದಿಂದ ಪಾರಾಗಿದ್ದಾಳೆ. ಬಳಿಕ ವಿದ್ಯಾರ್ಥಿನಿಯ ಪೋಷಕರು ನಿಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ, ಆದರೆ ಪೊಲೀಸರು ದೌರ್ಜನ್ಯ ಕಾಯ್ದೆಯನ್ನು ಇದರಲ್ಲಿ ಸೇರಿಸಿಲ್ಲ ಎಂದು ಆರೋಪಿಸಿ ಉಪವಾಸ ಸತ್ಯಾಗ್ರಹ ಎಚ್ಚರಿಕೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಣ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿರುವ ಸಾಮಾಜಿಕ ಪರಿವರ್ತನ ಚಳುವಳಿಯ ಜಿಲ್ಲಾ ಸಂಚಾಲಕ ಮೋಹನ್ ಮೌರ್ಯ, ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಮಡಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಅವರು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ತಪ್ಪಿದಲ್ಲಿ 22ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಆರೋಪ ಏನು?: ಜ.17 ರಂದು ಸಂಜೆ ಮನೆಗೆ ತೆರಳುತ್ತಿದ್ದ ಪರಿಶಿಷ್ಟ ವಿದ್ಯಾರ್ಥಿನಿಯೊಬ್ಬಳನ್ನು ನಾಲ್ವರು ಯುವಕರು ಅಪಹರಣ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರ ಸಹಕಾರದಿಂದ ವಿದ್ಯಾರ್ಥಿನಿ ಸಂಕಷ್ಟದಿಂದ ಪಾರಾಗಿದ್ದಾಳೆ. ಬಳಿಕ ವಿದ್ಯಾರ್ಥಿನಿಯ ಪೋಷಕರು ನಿಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ, ಆದರೆ ಪೊಲೀಸರು ದೌರ್ಜನ್ಯ ಕಾಯ್ದೆಯನ್ನು ಇದರಲ್ಲಿ ಸೇರಿಸಿಲ್ಲವೆಂದು ಆರೋಪಿಸಿದರು.ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಯನ್ನು ಬಂಧಿಸಬೇಕು ಮತ್ತು ಒಟ್ಟು ಪ್ರಕರಣವನ್ನು ದೌರ್ಜನ್ಯ ಕಾಯ್ದೆಯಡಿ ದಾಖಲಿಸಿಕೊಳ್ಳಬೇಕು. ಒಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ರಾಜ್ಯ ಗೃಹ ಸಚಿವರ ಗಮನಕ್ಕೂ ತರಲಾಗುತ್ತದೆ ಎಂದರು. ಸಾಮಾಜಿಕ ಪರಿವರ್ತನ ಚಳುವಳಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ಜಯರಾಂ, ಹಾಗೂ ನಗರ ಸಂಚಾಲಕ ಎಚ್.ಎಸ್.ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.