ರಸ್ತೆಯ ಮೇಲೆ ಕಸ ವಿಲೇವಾರಿ ವಾಹನ ಸಂಚಾರ ನಿಷೇಧಿಸಬೇಕು, ತ್ಯಾಜ್ಯ ಘಟಕದಿಂದ ಉತ್ಪತ್ತಿಯಾಗುವ ಬೆಂಕಿಯ ಹೊಗೆಯನ್ನು ನಿಯಂತ್ರಿಸಬೇಕು ಹಾಗೂ ಗೂಂಡಾ ವರ್ತನೆ ಮಾಡುವ ಸಿಬ್ಬಂದಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳ ಜನರು ನಗರಸಭೆ ಆಯುಕ್ತ ಎಫ್.ಐ.ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ರಸ್ತೆಯ ಮೇಲೆ ಕಸ ವಿಲೇವಾರಿ ವಾಹನ ಸಂಚಾರ ನಿಷೇಧಿಸಬೇಕು, ತ್ಯಾಜ್ಯ ಘಟಕದಿಂದ ಉತ್ಪತ್ತಿಯಾಗುವ ಬೆಂಕಿಯ ಹೊಗೆಯನ್ನು ನಿಯಂತ್ರಿಸಬೇಕು ಹಾಗೂ ಗೂಂಡಾ ವರ್ತನೆ ಮಾಡುವ ಸಿಬ್ಬಂದಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳ ಜನರು ನಗರಸಭೆ ಆಯುಕ್ತ ಎಫ್.ಐ.ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರುವ ಹಿಂದುಳಿದ ಗ್ರಾಮವಾಗಿದೆ. ಎರಡು ಗ್ರಾಮಗಳ ಸಾರ್ವಜನಿಕರು ಉಪಜೀವನಕ್ಕಾಗಿ ಕೃಷಿ ಚಟುವಟಿಕೆ ಮತ್ತು ನಗರ ಪ್ರವೇಶಗಳಲ್ಲಿ ವಿವಿಧ ಕೂಲಿ ಕೆಲಸದ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅವರ ಬದುಕೇ ಸರ್ವನಾಶವಾಗುತ್ತದೆ. ನಗರ ಪ್ರದೇಶದಿಂದ ಪ್ರತಿದಿನ 30ಕ್ಕೂ ಹೆಚ್ಚು ಕಸ ವಿಲೇವಾರಿ ವಾಹನಗಳು ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡ ರಸ್ತೆಗಳ ಮೇಲೆ ಸಂಚರಿಸುತ್ತವೆ. ಈ ವೇಳೆ ವಾಹನಗಳಿಂದ ರಸ್ತೆಯ ಅಕ್ಕ ಪಕ್ಕದಲ್ಲಿ ತ್ಯಾಜ್ಯಗಳು ಚೆಲ್ಲುತ್ತವೆ. ಇದರಿಂದ ವಿಪರೀತ ವಾಸನೆ ನೊಣಗಳು, ಕ್ರಿಮಿ, ಕೀಟಗಳು ಗ್ರಾಮಗಳಲ್ಲಿ ಹರಡಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ತ್ಯಾಜ್ಯ ವಿಲೇವಾರಿ ವಾಹನಗಳು ಸಂಚರಿಸುವ ರಸ್ತೆಯ ಅಕ್ಕಪಕ್ಕದಲ್ಲಿ ಮನೆಗಳು ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆಗಳಿವೆ. ಕಸ ವಿಲೇವಾರಿ ವಾಹನದಲ್ಲಿ ಸತ್ತ ಪ್ರಾಣಿಗಳು ಹಾಗೂ ತ್ಯಾಜ್ಯಗಳನ್ನು ಸಾಗಿಸುವಾಗ ಅದರ ದುರ್ವಾಸನೆ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ವಿಚಲಿತರಾಗಿ ಏಕಾಗ್ರತೆ ಕಳೆದುಕೊಂಡು ಓದು ಬರಹದ ಕಡೆಗೆ ಗಮನಹರಿಸದಂತಾಗಿದೆ. ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳಿಂದ 500 ಮೀಟರ್ ಅಂತರವಿರುವ ತ್ಯಾಜ್ಯ ಸಂಗ್ರಹಣ ಘಟಕದಿಂದ ಉತ್ಪತ್ತಿಯಾಗುವ ಬೆಂಕಿಯ ವಿಷಯಪೂರಿತ ಹೊಗೆಯು ವಾತಾವರಣದ ಗಾಳಿಯೊಂದಿಗೆ ಬೆರೆತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿವೆ. ಇದರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇನ್ನೈದು ವರ್ಷಗಳಲ್ಲಿ ಕ್ಯಾನ್ಸರ್ ಪೀಡಿತ ಪ್ರದೇಶಗಳ ಪಟ್ಟಿಗೆ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ಗ್ರಾಮಗಳು ಸೇರ್ಪಡೆಯಾಗುವದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಜಗದೀಶ ಕೆರೂಡಿ, ಪ್ರವೀಣ ಪಾಟೀಲ, ಸತೀಶ್ ಹೊಳಿಬಾಗಿಲ, ಶಿವಪ್ಪ ಕೆರೂಡಿ, ಮಂಜಪ್ಪ ಲಮಾಣಿ, ಗೋವಿಂದಪ್ಪ ಲಮಾಣಿ, ಗಂಗಣ್ಣ ಮನ್ನಣ್ಣನವರ, ರಾಜು ಓಲೇಕಾರ, ಬರಮಪ್ಪ ಕಂಬಳಿ, ಮಲ್ಲೇಶಪ್ಪ ಜ್ಯೋತಿ, ಮಲ್ಲಪ್ಪ ಪೂಜಾರ, ನೀಲಪ್ಪ ಛತ್ರ, ಪರಮೇಶ ಕೆರೂಡಿ ಮತ್ತಿತರರಿದ್ದರು.