ಬೆಳಗಾವಿ: ನಗರದಲ್ಲಿ ಅನಧಿಕೃತವಾಗಿ ಆರಂಭಗೊಂಡಿರುವ ಖಾಸಗಿ ಹೂವಿನ ಮಾರುಕಟ್ಟೆ ವಿರುದ್ಧ ಸರ್ಕಾರಿ ಹೂವಿನ ಮಾರುಕಟ್ಟೆಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಮಾರುಕಟ್ಟೆ ಬಂದ್ ಮಾಡಿಸುವಂತೆ ದಂಡು ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ಭರತೇಶ್ ಶಿಕ್ಷಣ ಸಂಸ್ಥೆ ಸಮೀಪ ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆ ಆರಂಭಿಸಿರುವುದಾಗಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮಾರುಕಟ್ಟೆ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಮಾರುಕಟ್ಟೆಯ ವ್ಯಾಪಾರಿಗಳ ನಿಯೋಗ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಚಲವಾರ ಸುದಾಮ್ ಹರಿವಿಜಯ್ ಅವರನ್ನು ಭೇಟಿ ಮಾಡಿ, ತಕ್ಷಣವೇ ಅನಧಿಕೃತ ಮಾರುಕಟ್ಟೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ. ಸಾಮಾಜಿಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ ಮಾತನಾಡಿ, ಈಗಾಗಲೇ ಸರ್ಕಾರಿ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಅನುಮತಿ ಇಲ್ಲದೆ ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಖಾಸಗಿ ಮಾರುಕಟ್ಟೆ ಆರಂಭಿಸಿರುವುದು ನಿಯಮಬಾಹಿರವಾಗಿದೆ ಎಂದು ಹೇಳಿದರು.