ದೂಡಿಮೆಗೆ ತಕ್ಕ ಕೂಲಿ ನೀಡಲು ಆಗ್ರಹ

| Published : Jun 16 2025, 01:51 AM IST

ಸಾರಾಂಶ

ಎಚ್.ಡಿ‌.ಕೋಟೆ: ಶುಂಠಿ ಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಕೂಲಿ ನೀಡುತ್ತಿಲ್ಲ ಎಂದು ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಾಲೂಕಿನ ಬೊಪ್ಪನಹಳ್ಳಿ ಗೇಟ್ ಬಳಿಯ ಸಂಘದ ಆವರಣದಲ್ಲಿ ಪ್ರತಿಭಟಿಸಿದರು.

ಎಚ್.ಡಿ‌.ಕೋಟೆ: ಶುಂಠಿ ಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಕೂಲಿ ನೀಡುತ್ತಿಲ್ಲ ಎಂದು ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಾಲೂಕಿನ ಬೊಪ್ಪನಹಳ್ಳಿ ಗೇಟ್ ಬಳಿಯ ಸಂಘದ ಆವರಣದಲ್ಲಿ ಪ್ರತಿಭಟಿಸಿದರು.

ಕೋಟೆ, ಸರಗೂರು, ಹುಣಸೂರು, ತಾಲೂಕು ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಗ್ಗೆ ಸುಂದರ ಮಾತನಾಡಿ, ತಾಲೂಕಿನಲ್ಲಿ ಅತೀ ಹೆಚ್ಚಾಗಿ ಶುಂಠಿ ಬೆಳೆ ಬೆಳೆಯುತ್ತಿದ್ದು ಇದನ್ನು ಅವಲಂಬಿಸಿ ಸಾವಿರಾರು ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಶುಂಠಿ ಖರೀದಿದಾರರು, ಶುಂಠಿ ಕೀಳುವ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುತ್ತಿದ್ದು, ಇದರಿಂದ ನಮ್ಮ ಕುಟುಂಬ ನಿರ್ವಹಣೆ ಸಂಕಷ್ಟಕ್ಕೀಡಾಗಿದೆ ಎಂದು ಆರೋಪಿಸಿದರು.

ಒಂದು ಮೂಟೆ ಶುಂಠಿ ಕೀಳಲು 150 ರೂ. ನಿಗದಿಪಡಿಸಿದ್ದು, 20 ಜನ ಕೂಲಿ ಕಾರ್ಮಿಕರು ಒಂದು ದಿನಕ್ಕೆ 70 ರಿಂದ 80 ಮೂಟೆ ಶುಂಠಿ ಕೀಳಬಹುದು. ಆದರೆ ವಾಹನ ಸೇರಿದಂತೆ ಇತರೆ ಖರ್ಚು ಕಳೆದು ಕಾರ್ಮಿಕರಿಗೆ ಕಡಿಮೆ ಕೂಲಿ ಸಿಗುತ್ತಿದೆ. ಇದರಿಂದ ಕೂಲಿಕಾರ್ಮಿಕರ ಜೀವನಕ್ಕೆ ತೊಂದರೆ ಉಂಟಾಗಿದೆ.

ಶುಂಠಿ ಖರೀದಿದಾರರಿಗೆ ಕಳೆದ ಐದಾರು, ತಿಂಗಳಿಂದ ಹೆಚ್ಚುವರಿ ದರ ನೀಡುವಂತೆ ಒತ್ತಾಯಿಸಿದ್ದರೂ ಕೂಡ ಶುಂಠಿ ಖರೀದಿದಾರರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಹೆಚ್ಚಿನ ದರ ನೀಡುವವರೆಗೂ ಶುಂಠಿ ಕೆಲಸಕ್ಕೆ ಹೋಗುವುದಿಲ್ಲ ಎಂದು ನಾವು ತೀರ್ಮಾನಿಸಿದ್ದೇವೆ ಎಂದು ಪಟ್ಟು ಹಿಡಿದರು.

ಈಗ ನೀಡುತ್ತಿರುವ 150 ರೂ.ಗಳಿಂದ 200 ರೂ. ನೀಡಬೇಕು ಎಂದು ಮನವಿ ಮಾಡಿದರು. ತಾಲೂಕಿನಲ್ಲಿ ಶುಂಠಿ ಬೆಳೆಯುವ ರೈತರಿಗಿಂತ, ಶ್ರಮಜೀವಿ ಕೂಲಿ ಕಾರ್ಮಿಕರಿಗಿಂತ ಖರೀದಿದಾರಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.

ಶುಂಠಿ ಖರೀದಿದಾರರು ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ. ನಾಗರಾಜು, ಉಪಾಧ್ಯಕ್ಷರಾದ ರಾಮಕೃಷ್ಣ, ಬೆಟ್ಟನಾಯಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಸೋಮೇಶ್, ಖಜಾಂಚಿ ಮರಿಸಿದ್ದಯ್ಯ, ಸದಸ್ಯರಾದ ರಾಜು, ಬೆಟ್ಟನಾಯಕ, ಮಹದೇವನಾಯಕ, ತೇಜು ಕುಮಾರ್, ಚಿಕ್ಕಣ್ಣ, ದುಂಡುರಾಜ್ ಮೊದಲಾದವರು ಇದ್ದರು.