ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕಲ್ಯಾಣ ಇಲಾಖೆಗಳಲ್ಲಿ ಕಳೆದ ಎರಡು ದಶಕದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ, ಉದ್ಯೋಗ ಭದ್ರತೆ ನೀಡುವಂತೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಭಾನುವಾರ ಶಾಸಕ ಕೆ. ನೇಮಿರಾಜ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕಲ್ಯಾಣ ಇಲಾಖೆಗಳಲ್ಲಿ ಕಳೆದ ಎರಡು ದಶಕದಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ, ಉದ್ಯೋಗ ಭದ್ರತೆ ನೀಡುವಂತೆ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಭಾನುವಾರ ಶಾಸಕ ಕೆ. ನೇಮಿರಾಜ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜನವಾದಿ ಮಹಿಳಾ ಸಂಘದ ಜಿಲ್ಲಾ ಸಂಚಾಲಕಿ ಸರ್ದಾರ್ ಹುಲಿಗೆಮ್ಮ ಮಾತನಾಡಿ, ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರು ಹಾಗೂ ಸಹಾಯಕರು, ನೈರ್ಮಲ್ಯ ಕಾವಲುಗಾರರು, ಡಿ-ಗ್ರೂಪ್ ಅಟೆಂಡರ್ಗಳು, ಕಂಪ್ಯೂಟರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ಗಳು ಮತ್ತು ಅತಿಥಿ ಶಿಕ್ಷಕರು ಸೂಕ್ತ ವೇತನ ಹಾಗೂ ಉದ್ಯೋಗ ಭದ್ರತೆ ಇಲ್ಲದೇ ಅತಂತ್ರರಾಗಿದ್ದಾರೆ ಎಂದು ದೂರಿದರು.ಮೇ 22, 2026ರಂದು ರಾಜ್ಯ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸಬೇಕು. ಪ್ರತಿಯೊಬ್ಬ ಸಿಬ್ಬಂದಿಗೆ ತಿಂಗಳಿಗೆ ಕನಿಷ್ಠ ₹36,000 ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ನಿವೃತ್ತಿ ವರೆಗೆ ಉದ್ಯೋಗ ಭದ್ರತೆ ನೀಡಿ, ಪ್ರಸ್ತುತ ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿಯೇ ಕಾಯಂಗೊಳಿಸಬೇಕು. ಗುತ್ತಿಗೆದಾರರ ಮಧ್ಯಸ್ಥಿಕೆ ಇಲ್ಲದೆ ಇಲಾಖೆಯಿಂದಲೇ ನೇರವಾಗಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.ಹೋರಾಟ ಸಮಿತಿಯ ಮುಖಂಡ ನಾಗರಾಜ್ ನಾಯ್ಕ್ ಮಾತನಾಡಿ, ವೇತನ ಚೀಟಿ, ನೇಮಕಾತಿ ಆದೇಶ, ಗುರುತಿನ ಚೀಟಿ, ಸೇವಾ ಪ್ರಮಾಣಪತ್ರ, ಇಎಸ್ಐ ಮತ್ತು ಪಿಎಫ್ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ವಾರಕ್ಕೆ ಒಂದು ದಿನ ರಜೆ, ನಿಗದಿತ ಕೆಲಸದ ಅವಧಿ ಹಾಗೂ ಕರ್ತವ್ಯದ ವೇಳೆ ಅಪಘಾತ ಸಂಭವಿಸಿದರೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು. ಹೊರಗುತ್ತಿಗೆ ಸಿಬ್ಬಂದಿ ಕಾಯಂಗೊಳಿಸಲು ಅಗತ್ಯವಾದ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಮುಖಂಡರಾದ ಕೆ. ಹುಲಿಗೆಮ್ಮ ಸದಸ್ಯರಾದ ಕೊಟ್ರಮ್ಮ, ಮರುಳ ಸಿದ್ದಮ್ಮ, ಮಂಗಳಾ, ಮಾಲಾಶ್ರೀ ಹನುಮಕ್ಕ, ಪಲ್ಲವಿ ಜ್ಯೋತಿ ಪಕುರಮ್ಮ, ಬೇಬಿ ಬಾಯಿ, ನೇತ್ರಮ್ಮ, ಸವಿತ, ಮಾಳಮ್ಮ, ಭಾಗ್ಯಮ್ಮ, ಶಶಿಕಲಾ, ಶೀಲಾ ಮತ್ತಿತರರಿದ್ದರು.