ಧರ್ಮಸ್ಥಳ ವಿರುದ್ದದ ಷ್ಯಡ್ಯಂತ್ರದ ಬಗ್ಗೆ ತನಿಖೆ ನಡೆಸಲು ಆಗ್ರಹ

| Published : Aug 23 2025, 02:00 AM IST

ಸಾರಾಂಶ

ಕೋಟ್ಯಾಂತರ ಹಿಂದೂಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಇಲ್ಲಿನ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕೋಟ್ಯಾಂತರ ಹಿಂದೂಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಇಲ್ಲಿನ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರ ಸಮನ್ವಯ ಸಮಿತಿ ಮುಖಂಡ ಪರಶುರಾಮ ಮಾತನಾಡಿ, ಕೋಟ್ಯಾಂತರ ಹಿಂದೂಗಳ ಭಕ್ತಿ ಭಾವದ ಕೇಂದ್ರವಾಗಿರುವ ಧರ್ಮಸ್ಥಳ ಕುರಿತು ಇತ್ತೀಚೆಗೆ ನಡೆದ ಘಟನೆಗಳು ಪ್ರತಿಯೊಬ್ಬ ಹಿಂದೂ ಭಕ್ತರ ಮನಸ್ಸಿನಲ್ಲಿ ಭಾರಿ ಆತಂಕವನ್ನು ಉಂಟು ಮಾಡಿದೆ. ಅನಾಮಿಕನೊಬ್ಬನ ಹೇಳಿಕೆಯ ಆಧಾರದ ಮೇಲೆ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ, ಧರ್ಮಸ್ಥಳದ ವಿವಿಧಡೆ ತನಿಖೆ ನಡೆಸಿದರೂ ಯಾವುದೇ ಸ್ಪಷ್ಟವಾದ ಸತ್ಯ ಹೊರ ಬಂದಿಲ್ಲ, ಆದರೆ ತನಿಖೆ ಫಲಿತಾಂಶ ಪ್ರಕಟವಾಗುವ ಮೊದಲು ಕೆಲವು ಯೂಟ್ಯೂಬರ್ ಗಳು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಸುಳ್ಳು ಹಾಗೂ ದುರುದ್ದೇಶಿತ ವರದಿಗಳನ್ನು ಪ್ರಸಾರ ಮಾಡಿ ಧರ್ಮಸ್ಥಳದ ತೇಜೋವಧೆ ನಡೆಸಿದ ಘಟನೆ ಅತ್ಯಂತ ದುಃಖದಾಯಕವಾಗಿದೆ ಎಂದ ಅವರು, ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದಾಗ ಇದು ಕೇವಲ ತಾತ್ಕಾಲಿಕ ಘಟನೆ ಅಲ್ಲದೇ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುತ್ತಿರುವ ಒಂದು ವ್ಯವಸ್ಥಿತ ಪಿತೂರಿಯೆಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಅಪಮಾನ ಮಾಡುವವರ ವಿರುದ್ದ ಸರ್ಕಾರವು ತಕ್ಷಣವೇ ವಿಶೇಷ ತನಿಖಾ ದಳದಿಂದ ಸಂಪೂರ್ಣ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳದ ವಿರುದ್ಧ ಸುಳ್ಳು ಹಾಗೂ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಕಮ್ಯೂನಿಸ್ಟ್ ಎಡಪಂತೀಯ ಒತ್ತಡಗಳಿಂದ ಹಾಗೂ ಅಪಪ್ರಚಾರದಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆಯನ್ನು ಕೈಗೊಳ್ಳಬೇಕು, ಹಿಂದೂ ಸಮಾಜದ ಭಾವನೆಗಳಿಗೆ ಗೌರವ ನೀಡಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಸೌ.ಕಾವೇರಿ ರಾಯ್ಕರ್, ಈರೇಶ್, ರಮೇಶ್, ತಾ.ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕುಮಾರಸ್ವಾಮಿ, ಪ್ರಕಾಶ್‌ ಜಿನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರದೀಪ್, ಬಿ.ವಿ.ಮಂಜುನಾಥ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿ.ರಾಮಣ್ಣ, ಉಪಾಧ್ಯಕ್ಷ ಎಸ್.ವೆಂಕಟೇಶ್, ಬಾಲರಾಜ್, ಪ್ರಕಾಶ್ ನಳ್ಳಿನಕೊಪ್ಪ, ಶರತ್, ಈಸೂರು ಜಗದೀಶ್, ಶಿವಮೂರ್ತಿ, ಸತೀಶ್ ಮತ್ತಿತರರು ಹಾಜರಿದ್ದರು.