ಸಾರಾಂಶ
ನರಗುಂದ ಮಾರ್ಗವಾಗಿ ಘಟಪ್ರಭಾದಿಂದ ಕುಷ್ಟಗಿವರೆಗೆ ಹೊಸ ರೈಲ್ವೆ ಮಾರ್ಗಕ್ಕೆ ಭೂಮಿ ಸಮೀಕ್ಷೆ ಮಾಡಬೇಕೆಂದು ಆಗ್ರಹಿಸಿ ನರಗುಂದ ಹಾಗೂ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದರು.
ನರಗುಂದ: ನರಗುಂದ ಮಾರ್ಗವಾಗಿ ಘಟಪ್ರಭಾದಿಂದ ಕುಷ್ಟಗಿವರೆಗೆ ಹೊಸ ರೈಲ್ವೆ ಮಾರ್ಗಕ್ಕೆ ಭೂಮಿ ಸಮೀಕ್ಷೆ ಮಾಡಬೇಕೆಂದು ಆಗ್ರಹಿಸಿ ನರಗುಂದ ಹಾಗೂ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದರು.
ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ನೀಡುವಂತೆ ಕುಷ್ಟಗಿ ಹಾಗೂ ನರಗುಂದ ರೈಲ್ವೆ ಹೋರಾಟ ಸಮಿತಿಯಿಂದ ಜಂಟಿಯಾಗಿ ಹುಬ್ಬಳ್ಳಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರ ಕಾರ್ಯದರ್ಶಿ ಸುನೀಲ್ ಜಿ. ಅವರಿಗೆ ಮನವಿ ಸಲ್ಲಿಸಿ ಆನಂತರ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನ ನಂದಿ ಮಾತನಾಡಿ, ಈ ರೈಲ್ವೆ ಹೊಸ ಬ್ರಾಡಗೇಜ್ ಮಾರ್ಗ ಕುಷ್ಟಗಿಯಿಂದ ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ ಮೂಲಕ ಘಟಪ್ರಭಾ ಸಂಪರ್ಕಿಸುವ ಹೊಸ ಯೋಜನೆ ಪರಿಗಣಿಸಿ ಸಮೀಕ್ಷೆ ಅನುಮೋದನೆ ನೀಡಬೇಕು. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ರೈಲ್ವೆ ಖಾತೆ ಸಚಿವ ವ್ಹಿ. ಸೋಮಣ್ಣ ಸೇರಿದಂತೆ ಸಂಸದರಾದ ಜಗದೀಶ ಶೆಟ್ಟರ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಪ್ರತ್ಯೇಕ ಮನವಿ ನೀಡಿದ್ದೇವೆ, ಮೇಲಾಗಿ ಸಾರ್ವಜನಿಕ ಸರಕು ಸಾಗಣೆ ಪ್ರವಾಸೋದ್ಯಮ ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಈ ಹೊಸ ರೈಲ್ವೆ ಮಾರ್ಗ ಹಾದು ಹೋಗುವ ಭೂಮಿಯನ್ನು ಸಮೀಕ್ಷೆ ಮಾಡಬೇಕೆಂದು ಮನವಿ ಮಾಡಿಕೊಂಡರು. ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಮಾ. 28ರಂದು ಗದಗ-ವಾಡಿ ಹೊಸ ರೈಲು ಮಾರ್ಗದಲ್ಲಿ ರೈಲ್ವೆ ಸಂಚಾರಕ್ಕೆ ಪೂರಕವಾಗಿ ಸಿಆಕ್ಎಸ್ ನೇತೃತ್ವದಲ್ಲಿ ಲಿಂಗಲಬಂಡಿ-ಕುಷ್ಟಗಿ ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿರುವುದಕ್ಕೆ ರೈಲ್ವೆ ಇಲಾಖೆಯನ್ನು ಅಭಿನಂದಿಸುವೆ. ಏಪ್ರಿಲ್ನಲ್ಲೇ ಕುಷ್ಟಗಿಯಿಂದ ತಳಕಲ್ ಮಾರ್ಗವಾಗಿ ರೈಲು ಸಂಚರಿಸುವ ಬಗ್ಗೆ ಇಲಾಖೆಯ ಮೂಲಗಳು ಖಾತ್ರಿಪಡಿಸಿವೆ. ಈ ಮಾರ್ಗದ ಸಂಚಾರ ಸೇವೆಯ ಜೊತೆಯಲ್ಲಿ ಕುಷ್ಟಗಿ-ಯಶವಂತಪುರ ರೈಲ್ವೆ ಸಂಚಾರ ಸೇವೆ ಆರಂಭಿಸಬೇಕೆನ್ನುವುದು ಬೇಡಿಕೆಯಾಗಿದ್ದು, ರೈಲ್ವೆ ಇಲಾಖೆ ಪರಿಗಣಿಸುವ ವಿಶ್ವಾಸವಿದೆ. ಹಾಗೆ ಕುಷ್ಟಗಿ-ನರಗುಂದ-ಘಟಪ್ರಭಾ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಅನುಮೋದನೆ ಕಲ್ಪಿಸಬೇಕು ಎಂದರು.ನೈರುತ್ಯ ವಲಯ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಕಾರ್ಯದರ್ಶಿ ಸುನೀಲ್ ಜಿ. ಅವರು ಹೋರಾಟಗಾರ ಮನವಿ ಸ್ವೀಕರಿಸಿ ಈ ಮನವಿಯನ್ನು ಪ್ರಧಾನ ವ್ಯವಸ್ಥಾಪಕರ ಅವಗಾಹನೆ ತರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಶಾಂತರಾಜ ಗೋಗಿ, ನರಸಿಂಹ ಮುಜುಂದಾರ, ಮಾರುತಿ ಭೋಸ್ಲೆ, ಶಿವಯೋಗಿ, ನರಗುಂದ-ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.