ಮಾದರಿ ಮಾಲೀಕನಾಗಬೇಕಿದ್ದ ಸರ್ಕಾರವೇ ತನ್ನ ಇಲಾಖೆಗಳಲ್ಲಿ ಖಾಯಂ ಸ್ವರೂಪದ ಕೆಲಸಗಳು ಸೇರಿದಂತೆ ಬಹುತೇಕ ಕೆಲಸಗಳಿಗೆ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರನ್ನು ನೇಮಖಮಾಡಿಕೊಂಡು ಶೋಷಣೆ ಮಾಡುತ್ತಿದೆ.
ಹುಬ್ಬಳ್ಳಿ:
ಒಂದು ರೀತಿ ಜೀತ ಪದ್ದತಿ, ತೀವ್ರ ಸಂಕಷ್ಟ, ಶೋಷಣೆಯೊಳಗಾಗಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಕಾಯಂಮಾಡಲು ಸರ್ಕಾರ ಅಗತ್ಯ ಶಾಸನ ರೂಪಿಸಬೇಕೆಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ವಿದ್ಯುತ್ ಕಾರ್ಮಿಕರ ಫೆಡರೆಷನ್ ಗೌರವಾಧ್ಯಕ್ಷೆ ಎಸ್. ವರಲಕ್ಷ್ಮೀ ಒತ್ತಾಯಿಸಿದರು.ಅವರು ನಗರದ ಅಕ್ಕನ ಬಳಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್ ಹೆಸ್ಕಾಂ ವಲಯದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಾದರಿ ಮಾಲೀಕನಾಗಬೇಕಿದ್ದ ಸರ್ಕಾರವೇ ತನ್ನ ಇಲಾಖೆಗಳಲ್ಲಿ ಖಾಯಂ ಸ್ವರೂಪದ ಕೆಲಸಗಳು ಸೇರಿದಂತೆ ಬಹುತೇಕ ಕೆಲಸಗಳಿಗೆ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರನ್ನು ನೇಮಖಮಾಡಿಕೊಂಡು ಶೋಷಣೆ ಮಾಡುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಮಾಡುತ್ತಿಲ್ಲ. ಇತ್ತೀಚಿಗೆ ಪರಿಷ್ಕರಿಸಿದ ಕನಿಷ್ಟ ವೇತನವನ್ನು ಜಾರಿಮಾಡದೇ ತಡೆಹಿಡಿದು ಕಾರ್ಮಿಕರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದರುಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, ಪರಿಷ್ಕೃತ ಕನಿಷ್ಟ ವೇತನ ಜಾರಿ, ಖಾಯಂಮಾತಿ ಸೇರಿದಂತೆ ಮುಂತಾದ ಬೇಡಿಕೆಗಳಿಗಾಗಿ ಒತ್ತಾಯಿಸಿ ಇದೇ ಸೆಪ್ಟೆಂಬರ್ 29 ರಂದು ಬೆಂಗಳೂರಿನಲ್ಲಿ ವಿದ್ಯುತ್ ರಂಗದ ಉತ್ಪಾದನಾ, ಸರಬುರಾಜು, ವಿತರಣೆ ವಿಭಾಗದಲ್ಲಿ ದುಡಿಯುವ ಕಾರ್ಮಿಕರ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಇಇಎಫ್ಐ ರಾಷ್ಟ್ರಾಧ್ಯಕ್ಷ ಸುದೀಪ್ ದತ್ತಾ, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಲಮರಂ ಕರೀಂ ಭಾಗವಹಿಸಿಲಿದ್ದಾರೆ ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ವಕೀಲರ ಪರಿಷತ್ ಸದಸ್ಯ ಬಸವರಾಜ ಕೋರಿಮಠ, ವಿರೇಶ ಕುಂಬಾರ, ದೊಡ್ಡಪ್ಪ ಬೋಳಕಟ್ಟಿ, ಹನಮಂತಪ್ಪ ಮಿಟ್ಟಲ್, ಬಸವರಾಜ, ಚಂದ್ರು ಬೆಣಕನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.