ಸೂರಿದ್ದರೂ ಅದರಲ್ಲಿ ಸ್ವಂತಿಕೆಯಿಲ್ಲದ ಆತಂಕದಲ್ಲಿದ್ದವರಿಗೆ ಶಾಶ್ವತ ಮಾಲೀಕತ್ವ ಒದಗಿಸಿದ ನಮ್ಮ ಸರ್ಕಾರದ ನಿರ್ಧಾರದಿಂದ ಹಾನಗಲ್ಲ ತಾಲೂಕಿನಲ್ಲಿ ೧೩ ಸಾವಿರ ಕುಟುಂಬಗಳು ತಮ್ಮ ಮನೆಯಲ್ಲಿ ನೆಮ್ಮದಿಯಿಂದಿದ್ದಾರೆ ಎಂದು ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಸೂರಿದ್ದರೂ ಅದರಲ್ಲಿ ಸ್ವಂತಿಕೆಯಿಲ್ಲದ ಆತಂಕದಲ್ಲಿದ್ದವರಿಗೆ ಶಾಶ್ವತ ಮಾಲೀಕತ್ವ ಒದಗಿಸಿದ ನಮ್ಮ ಸರ್ಕಾರದ ನಿರ್ಧಾರದಿಂದ ಹಾನಗಲ್ಲ ತಾಲೂಕಿನಲ್ಲಿ ೧೩ ಸಾವಿರ ಕುಟುಂಬಗಳು ತಮ್ಮ ಮನೆಯಲ್ಲಿ ನೆಮ್ಮದಿಯಿಂದಿದ್ದಾರೆ ಎಂದು ಶಾಸಕ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ತಿಳಿಸಿದರು.

ಗುರುವಾರ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಶೇಷಗಿರಿ, ಅರಿಷಿಣಗುಪ್ಪಿಮತ್ತು ಬಾಳಂಬೀಡ ಕಂದಾಯಗ್ರಾಮ, ಉಪ ಗ್ರಾಮಗಳ ಫಲಾನುಭವಿ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳ ಭರವಸೆ ನೀಡಿತ್ತು. ನಾವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಾನಗಲ್‌ ತಾಲೂಕಿನಲ್ಲಿ ೬ನೇ ಗ್ಯಾರಂಟಿಯಾಗಿ ಹಕ್ಕುಪತ್ರದ ಭರವಸೆ ನೀಡಿದ್ದೆವು. ೫೨ ದಿನಗಳ ಕಾಲ ದೃಢಸಂಕಲ್ಪ ಪಾದಯಾತ್ರೆ ಕೈಗೊಂಡಿದ್ದಾಗ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ಯಾವುದೇ ದಾಖಲೆ ಇಲ್ಲದೆ ಅತಂತ್ರವಾಗಿ ವಾಸಿಸುತ್ತಿದ್ದ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ಮಾಲಿಕತ್ವದ ಭರವಸೆ ನೀಡಲಾಗಿತ್ತು. ಈ ಭರವಸೆ ಈಡೇರಿಸಿ, ನುಡಿದಂತೆ ನಡೆದಿದ್ದೇವೆ. ಕೆಲ ತಾಂತ್ರಿಕ ಕಾರಣದಿಂದ ಕೆಲ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವುದು ಸಾಧ್ಯವಾಗಿಲ್ಲ. ಆದರೆ ಯಾವೊಬ್ಬಅರ್ಹ ಫಲಾನುಭವಿ ಕೈಬಿಟ್ಟು ಹೋಗದಂತೆ ಕಾಳಜಿ ವಹಿಸಲಾಗುವುದು ಎಂದರು.

ತಹಸೀಲ್ದಾರ್ ವಿಠ್ಠಲ್ ಚೌಗಲಾ ಮಾತನಾಡಿ, ಉಪ ನೋಂದಣಿ ಕಚೇರಿಯಲ್ಲಿ ಆಸ್ತಿಯ ಖರೀದಿ ನೋಂದಣಿ ಮಾಡಿಸಿ, ಮನೆ ಮಾಲಿಕತ್ವದ ಹಕ್ಕುಪತ್ರದ ಜೊತೆಗೆ ಇಸ್ವತ್ತು ಸಹ ವಿತರಿಸಲಾಗುತ್ತಿದೆ. ಇವೆಲ್ಲವೂ ಅಳಿಸಲಾಗದ ದಾಖಲೆಗಳು. ಮನೆ ಮಾಲಿಕತ್ವ ಹೊಂದುತ್ತಿರುವ ಕುಟುಂಬಗಳಲ್ಲಿ ನೆಮ್ಮದಿ ಕಾಣಲಾಗುತ್ತಿದೆ. ೫೦-೬೦ ವರ್ಷಗಳ ಸಮಸ್ಯೆಯನ್ನು ಶಾಸಕ ಶ್ರೀನಿವಾಸ ಮಾನೆ ಅವರು ಕಾಳಜಿ ವಹಿಸಿ ಪರಿಹರಿಸಿದ್ದಾರೆ. ಇನ್ನು ಮುಂದೆ ಸರ್ಕಾರದ ಎಲ್ಲ ಸೌಲಭ್ಯಗಳೂ ಸಹ ಈ ಕುಟುಂಬಗಳಿಗೆ ಸಿಗಲಿವೆ ಎಂದರು.

ಇದೇ ಸಂದರ್ಭದಲ್ಲಿ ಶೇಷಗಿರಿ ಗ್ರಾಮದ ೨೫, ಅರಿಷಿಣಗುಪ್ಪಿ ಗ್ರಾಮದ ೪೬ ಮತ್ತು ಬಾಳಂಬೀಡ ಗ್ರಾಮದ೨೩ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ, ಬ್ಲಾಕ್‌ ಕಾಂಗ್ರೆಸ್ ಸಮಿತಿ, ಕೆಪಿಸಿಸಿ ಪದಾಧಿಕಾರಿಗಳು, ಅಧಿಕಾರಿಗಳು, ಮುಖಂಡರು ಇದ್ದರು.ಒಂದೊಂದು ಫಲಾನುಭವಿ ಕುಟುಂಬಕ್ಕೆಆಯಾ ಗ್ರಾಮದ ಆಸ್ತಿ ಮೌಲ್ಯಕ್ಕೆಅನುಗುಣವಾಗಿ ಕನಿಷ್ಟ ೧೦ರಿಂದ ೧೫ ಲಕ್ಷ ರು. ಮೌಲ್ಯದ ನಿವೇಶನದ ಮಾಲಿಕತ್ವ ದೊರಕಿಸಲಾಗಿದೆ. ಹೊಸದಾಗಿ ಮನೆ ಕಟ್ಟಿಕೊಳ್ಳಬೇಕಾದರೆ ಇನ್ನು ಮುಂದೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡಲಿವೆ. ಮಳೆಗೆ ಮನೆ ಬಿದ್ದರೆ ಸರ್ಕಾರದ ಪರಿಹಾರವೂ ಸಿಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.