ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ರೂಪಿಸಿ 100 ಕೋಟಿ ರು. ಅನುದಾನ ಒದಗಿಸಲು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಹಾವೇರಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಲಾಯಿತು.ಅಗತ್ಯ ಅನುದಾನ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಲ್ಲಿಯೂ ನಮ್ಮ ಹಾವೇರಿ ವಿಶ್ವವಿದ್ಯಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಪ್ರಥಮ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸದೇ ಬೇರೆ ಕಾಲೇಜಿನಲ್ಲಿ ಆಯೋಜಿಸಿರುವುದು ಬೇಸರ ತರಿಸಿದೆ. ವಿಶ್ವವಿದ್ಯಾಲಯದ ಆವರಣದಲ್ಲಿಯೇ ಘಟಿಕೋತ್ಸವ ನಡೆಸಬೇಕೆಂಬುದು ನಮ್ಮ ಜಿಲ್ಲೆಯ ಎಲ್ಲ ಜನರ ಆಶಯವಾಗಿತ್ತು. ಹೀಗಾಗಿ ಇನ್ಮುಂದೆ ವಿವಿ ಆವರಣದಲ್ಲೇ ಘಟಿಕೋತ್ಸವ ಆಯೋಜಿಸುವಂತೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.42 ಎಕರೆ ಪ್ರದೇಶ ವ್ಯಾಪ್ತಿಯಲ್ಲಿರುವ ನಮ್ಮ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ, ಕಾಯಂ ಸಿಬ್ಬಂದಿ ನೇಮಕ, ಹೊಸ ವಿಭಾಗಗಳು, ಕೋರ್ಸುಗಳು, ಅಧ್ಯಯನ ಪೀಠಗಳು, ಕಟ್ಟಡಗಳು- ಸಭಾಂಗಣ, ಹಾಸ್ಟೆಲ್ಗಳು, ಕ್ಯಾಂಟೀನ್, ಸಮರ್ಪಕ ರಸ್ತೆ ಸೇರಿದಂತೆ ಇನ್ನೂ ಹಲವು ಮೂಲಭೂತ ಸೌಲಭ್ಯಗಳು ಅಗತ್ಯವಿದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳು, ಕುಲಸಚಿವರು ಸೇರಿ ಕೇವಲ ಮೂರು ಹುದ್ದೆಗಳಲ್ಲಿ ಕಾಯಂ ಇದ್ದಾರೆ. ಉಳಿದಂತೆ ಎಲ್ಲ ಬೋಧಕ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರಾಗಿ ಹಾಗೂ ಬೋಧಕೇತರ ಸಿಬ್ಬಂದಿಗಳು ಹೊರಗುತ್ತಿಗೆಯಾಗಿ ದುಡಿಯುತ್ತಿದ್ದಾರೆ. ವಿವಿಗೆ ಅಗತ್ಯವಿರುವ ಹಾಗೂ ಖಾಲಿಯಿರುವ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.ವಿವಿಗೆ ಅಗತ್ಯವಿರುವ ಕಟ್ಟಡಗಳು, ಅರ್ಜಿ ಹಾಕುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ ಕಲ್ಪಿಸಲು ಅಗತ್ಯ ಹಾಸ್ಟೇಲ್ ಮಂಜೂರುಗೊಳಿಸುವುದು, ಘಟಿಕೋತ್ಸವ ಸೇರಿದಂತೆ ವಿವಿಯ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಸಭಾಂಗಣ ನಿರ್ಮಾಣ, ಕ್ಯಾಂಟೀನ್, ಸಮರ್ಪಕ ರಸ್ತೆ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಹೀಗಾಗಿ ವಿಶೇಷ ಪ್ಯಾಕೇಜ್ ಮೂಲಕ ಅನುದಾನ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಬಸವರಾಜ ಪೂಜಾರ, ಪ್ರಮುಖರಾದ ಪರಿಮಳ ಜೈನ, ಬಸವರಾಜ ಎಸ್, ಉಡಚಪ್ಪ ಮಾಳಗಿ, ಎಂ. ಆಂಜನೇಯ, ಸುರೇಶ ಛಲವಾದಿ, ಡಾ. ತಿಪ್ಪೇಸ್ವಾಮಿ ಹೊಸಮನಿ, ಖಲಂದರ್ ಅಲ್ಲಿಗೌಡ್ರ, ಮಕಬುಲ್ ಎಂ.ಕೆ, ಅರುಣ ನಾಗಾವತ್, ಸಂಗೀತಾ ಮೋಟಳ್ಳಿ ಇತರರಿದ್ದರು.
ಹಾವೇರಿ ವಿಶ್ವವಿದ್ಯಾಲಯಕ್ಕೆ 100 ಕೋಟಿ ರು. ಅನುದಾನ ಒದಗಿಸಲು ಆಗ್ರಹ
ಹಾವೇರಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ರೂಪಿಸಿ 100 ಕೋಟಿ ರು. ಅನುದಾನ ಒದಗಿಸಲು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಹಾವೇರಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.