ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಸ್ಸಿ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾ ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆಗ್ರಹಿಸಿದರು. ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಾದರ ಮಾತನಾಡಿ, ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ ಮೂರು ದಶಕಗಳಿಂದ ನಿರಂತರ ಹೋರಾಟ ನಡೆದಿದೆ. ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದ ಜಾತಿಗಳ ಅಭಿವೃದ್ಧಿಯ ಕಲ್ಯಾಣದ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮಿಸಲಾತಿ ನೀಡುವ ಸಾಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠ ಆಗಸ್ಟ್ 1ರಂದು ತೀರ್ಪು ನೀಡಿದೆ. ಒಳಮೀಸಲಾತಿ ವರ್ಗೀಕರಣದಿಂದ ಎಲ್ಲ ಜಾತಿಗಳಿಗೆ ಸಮಾನ ಅವಕಾಶ ಲಭಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸರ್ಕಾರ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಿ ವರದಿ ನೀಡುವಂತೆ ೨೦೦೫ರಲ್ಲಿ ರಚಿಸಿದ ನ್ಯಾಯಮೂರ್ತಿ ಎ.ಜೆ.ಸದಾಶಿವ ಏಕ ಸದಸ್ಯ ಆಯೋಗ ರಾಜ್ಯದಲ್ಲಿ ೧೦೧ ಎಸ್ಸಿ ಜಾತಿ ಸಮುದಾಯಗಳ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು ೨೦೧೨ರಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಅದರ ದತ್ತಾಂಶಗಳು ಸರ್ಕಾರದ ಬಳಿ ಪರಿಶಿಷ್ಟ ಜಾತಿ/ವರ್ಗಗಳ ಜನಸಂಖ್ಯೆಯು ರಾಜ್ಯದಲ್ಲಿ ಅತೀ ಹೆಚ್ಚಿರುವುದನ್ನು ಮನಗಂಡಿರುವ ಉಚ್ಚ ನ್ಯಾಯಾಲಯದ ಸೂಚನೆಯಂತೆ ೨೦೧೯ರಲ್ಲಿ ನ್ಯಾ. ನಾಗಮೋಹನದಾಸ್ ಆಯೋಗ ರಚಿಸಿತ್ತು. ಸಮಗ್ರ ವರದಿ ಸರ್ಕಾರದ ನಿರ್ದೇಶನದಂತೆ, ಅನುಸೂಚಿತ ಜಾತಿ / ಪಂಗಡಗಳ ಜನಸಂಖ್ಯೆ ಹೋಲಿಸಿದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿರಬೇಕಾದ ಮೀಸಲಾತಿಯನ್ನು ಶೇ.೧೫ ರಿಂದ ಶೇ.೧೭ರಷ್ಟು ಏರಿಕೆ ಮಾಡಲು ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.೩ ರಿಂದ ಶೇ.೭ ಕ್ಕೆ ಹೆಚ್ಚಿಸಲು ವರದಿ ನೀಡಿದೆ. ಅದರಂತೆ, ನ್ಯಾ.ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು ೨೦೧೧ ರ ಜನಗಣತಿಯ ಸಂಖ್ಯಾಧಾರಗಳು ಮತ್ತು ವಿಸ್ತರಿಸಲಾದ ಶೇ.೧೭ರ ಮೀಸಲಾತಿಯನ್ನು ಬಳಸಿಕೊಂಡು ವರ್ಗಿಕರಣ ಸೂತ್ರ ರೂಪಿಸಲಾಗಿದೆ. ಸಾಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಮರೆಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸದ್ಯ ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗೊಂದಲ ಸೃಷ್ಟಿಸುತ್ತಿರುವುದು ಸಂವಿಧಾನಕ್ಕೆ ಅಪಚಾರ ಎಂದು ದೂರಿದರು.ಈ ಜಾತಿ ಜನಗಣತಿ ವರದಿಗೂ ಎಸ್ಸಿ ಒಳಮೀಸಲಾತಿ ವರ್ಗಿಕರಣಕ್ಕೂ ಯಾವುದೇ ಸಂಬಂಧವಿಲ್ಲ. ಒಳಮೀಸಲಾತಿ ಜಾರಿಗಾಗಿ ಎಸ್ಸಿ, ಎಸ್ಟಿ ಸಂಬಂಧಿಸಿದ ಮೂರು ಆಯೋಗಗಳ ವರದಿ ಅಂಕಿ ಸಂಖ್ಯೆ ಕಾನೂನುಬದ್ಧ ಕರಾರುವಕ್ಕಾದ ದತ್ತಾಂಶಗಳ ಸಮಗ್ರ ಮಾಹಿತಿ ಸರ್ಕಾರದ ಬಳಿ ಇದೆ. ಹೀಗಾಗಿ, ಸಂಪುಟದಲ್ಲಿ ಚರ್ಚಿಸಿ ಸುಪ್ರೀಂ ಕೋರ್ಟ್ನ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠ ನೀಡಿದ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಪ್ರಹ್ಲಾದ ಕರೆನ್ನವರ, ರಾಜು ಚಳ್ಳಮದಾರ, ಪ್ರಭಾಕರ ಕುಚಬಾಳ, ಆರ್.ಡಿ.ಜೇವೂರ, ಹಣಮಂತ ಬಿರಾದಾರ, ಸಾಯಿಕುಮಾರ ಬಿಸನಾಳ, ಪರಶುರಾಮ ರೋಣಿಹಾಳ, ಮಲ್ಲಿಕಾರ್ಜುನ ದೇವರಮನಿ, ವಸಂತ ಹೊಳೆನ್ನವರ, ಪ್ರಶಾಂತ ದೊಡಮನಿ, ರಮೇಶ ಆಲಮಟ್ಟಿ, ಸುಭಾಸ ಕತ್ನಳ್ಳಿ, ಸದಾನಂದ ಗುನ್ನಾಪೂರ, ಸಿದ್ದು ಮಾದರ, ಹಣಮಂತ ಬಿಳಿಭಾವಿ, ರಮೇಶ ಮಾದರ, ಮಲ್ಲಿಕಾರ್ಜುನ ದೊಡಮನಿ, ಕೆ.ಬಿ.ದೊಡಮನಿ, ಸಂಜು ಕಲ್ಯಾಣಿ, ಅಶೋಕ ಕರೆಕಲ್ಲ, ತೇಪು ಆಲೂರ, ರಾಜಕುಮಾರ ಬಾಸಗಿ, ಸುನೀಲ ಬಬಲೇಶ್ವರ ಇನ್ನು ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.