ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

| Published : Jan 02 2025, 12:32 AM IST

ಸಾರಾಂಶ

ಕುಡಿಯುವ ನೀರಿನ ತೊಂದರೆಯಾದಲ್ಲಿ ತಕ್ಷಣ ಸಂಬಂಧಿಸಿದ ವಾರ್ಡ್‌ಗಳಿಗೆ ನೀರು ಪೂರೈಸಲು 5 ಟ್ಯಾಂಕರ್‌ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಕ್ರಮ ಜರುಗಿಸಬೇಕು

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ನೇತೃತ್ವದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿ ಗೋವಿಂದರೆಡ್ಡಿಗೆ ಮನವಿ ಸಲ್ಲಿಸಿದರು.

ಅವಳಿ ನಗರದಲ್ಲಿ ಈಗಾಗಲೇ ಹಲವಾರು ವಾರ್ಡ್‌ಗಳಲ್ಲಿ ಕೊಳವೆಬಾವಿ ಪೈಪ್ ಮತ್ತು 24/7 ನೀರಿನ ಪೈಪಲೈನ್ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸಲು ಹಲವಾರು ಬಾರಿ ಪೌರಾಯುಕ್ತರಿಗೆ ಮತ್ತು ಸಹಾಯಕ ಅಭಿಯಂತರರ ಗಮನಕ್ಕೆ ತಂದಿದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಹದಗೆಟ್ಟಿದ್ದು, ಕುಡಿಯುವ ನೀರಿನ ತೊಂದರೆಯಾದಲ್ಲಿ ತಕ್ಷಣ ಸಂಬಂಧಿಸಿದ ವಾರ್ಡ್‌ಗಳಿಗೆ ನೀರು ಪೂರೈಸಲು 5 ಟ್ಯಾಂಕರ್‌ ಬಾಡಿಗೆ ರೂಪದಲ್ಲಿ ಪಡೆದುಕೊಳ್ಳಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ನಗರದ 35 ವಾರ್ಡ್‌ಗಳಲ್ಲಿ ಬೋರವೆಲ್ ಹಾಗೂ ಪೈಪಲೈನ್‌ನ್ನು ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಪ್ರತಿ ವಾರ್ಡ್‌ಗೆ ತಲಾ ₹5 ಲಕ್ಷ ಟೆಂಡರ್ ಕರೆಯಲಾಗಿದ್ದು, ಈವರೆಗೂ ಟೆಂಡರ್ ಓಪನ್ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು. ತಕ್ಷಣ ಟೆಂಡರ ಓಪನ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು, 35 ವಾರ್ಡ್‌ಗಳಲ್ಲಿ ಬೋರವೆಲ್ ಹಾಗೂ ಪೈಪಲೈನ್ ಹೊಸದಾಗಿ ಹಾಕುವುದು ಮತ್ತು ರಿಪೇರಿ ಮಾಡಲು ಪ್ರತಿ ವಾರ್ಡ್‌ಗೆ ನಿಗದಿಯಾಗಿರುವ 5 ಲಕ್ಷ ಮೊತ್ತದ ಟೆಂಡರ್‌ನ್ನು ಕೂಡಲೇ ಓಪನ್ ಮಾಡುವುದರ ಜತೆಗೆ ಕಾಲುವೆ ಮೂಲಕ ಡಂಬಳ ಕಾಲುವೆಗೆ ನೀರು ಹರಿಸಿ ಅವಳಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಜರುಗಿಸಲು ಪೌರಾಯುಕ್ತರಿಗೆ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಬರಕತ್‌ಅಲಿ ಮುಲ್ಲಾ, ಲಕ್ಷ್ಮೀ ಸಿದ್ದಮ್ಮನಹಳ್ಳಿ, ಶಕುಂತಲಾ ಅಕ್ಕಿ, ಅನಿಲ ಗರಗ, ಚಾಂದ್ ಕೊಟ್ಟೂರು, ವಸಂತ ಸಿದ್ದಮ್ಮನಹಳ್ಳಿ, ಮುನ್ನಾ ರೇಶ್ಮಿ, ಲಕ್ಷ್ಮಣ ಭಜಂತ್ರಿ, ಸಮೀರ ಕೊಟ್ಟೂರ ಸೇರಿ ಹಲವರು ಇದ್ದರು.