ಶಿಕ್ಷಕನ ಮೇಲೆ ಹಲ್ಲೆ ಮಾಡಿ, ಚಪ್ಪಲಿ ಹಾಕಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ರಾಜ್ಯಾದ್ಯಂತ ಸುದ್ದಿಯಾಗಿ 22 ಜನರ ಮೇಲೆ ಪ್ರಕರಣ ದಾಖಲಾದರೂ ಸಹ ಇದುವರೆಗೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ ಎಂದು ಕುರುಬ ಸಮಾಜ ತಾಲೂಕು ಅಧ್ಯಕ್ಷ ಶಿವರಾಜ ಅಮರಾಪುರ ಅಸಮಾಧಾನ ವ್ಯಕ್ತಪಡಿಸಿದರು.
ಸವಣೂರು: ಶಿಕ್ಷಕನ ಮೇಲೆ ಹಲ್ಲೆ ಮಾಡಿ, ಚಪ್ಪಲಿ ಹಾಕಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ರಾಜ್ಯಾದ್ಯಂತ ಸುದ್ದಿಯಾಗಿ 22 ಜನರ ಮೇಲೆ ಪ್ರಕರಣ ದಾಖಲಾದರೂ ಸಹ ಇದುವರೆಗೂ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ ಎಂದು ಕುರುಬ ಸಮಾಜ ತಾಲೂಕು ಅಧ್ಯಕ್ಷ ಶಿವರಾಜ ಅಮರಾಪುರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪಟ್ಟಣದ ಕೆಂಡದಸ್ವಾಮಿಮಠದ ಸಭಾ ಭವನದಲ್ಲಿ ಭಾನುವಾರ ತಾಲೂಕು ಕುರುಬ ಸಮಾಜದ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಿಕ್ಷಕ ಮಕ್ಕಳ ಮೇಲೆ ತಪ್ಪು ಎಸಗಿದ್ದಾನೆ ಎನ್ನುವಂತಹ ಸತ್ಯ ಹೊರ ಬಂದರೆ ದುಷ್ಕೃತ್ಯ ಎಸಗಿದ ಶಿಕ್ಷಕನಿಗೆ ಗಲ್ಲು ಶಿಕ್ಷೆಯಾದರೂ ಸಹ ನಮ್ಮ ಸಹಮತವಿದೆ. ಆದರೆ, ಒಂದು ಕಾನೂನು ಚೌಕಟ್ಟಿನಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ತಾಲೂಕು ದಂಡಾಧಿಕಾರಿಗಳು, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ. ಶಿಕ್ಷಕನ ಮೇಲೆ ಹಲ್ಲೆಯನ್ನು ಮಾಡಿ ಚಪ್ಪಲಿ ಹಾರವನ್ನು ಹಾಕಿ ಮೆರವಣಿಗೆ ಮಾಡಿರುವ ಕೃತ್ಯ ಕಾನೂನಿನ ಚೌಕಟ್ಟನ್ನು ಮೀರಿ ನಡೆದಿದೆ. ಇದೇ ರೀತಿ ನಡೆದರೆ ಸಮಾಜದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಶಿಕ್ಷಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಒಂದು ವಾರದೊಳಗೆ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ತಪ್ಪಿದಲ್ಲಿ ಕುರುಬ ಸಮಾಜದ ವತಿಯಿಂದ ತಾಲೂಕಿನಾದ್ಯಂತ ಕರೆ ನೀಡಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು. ನಡೆದ ಗಲಭೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಮಾಡಬೇಕು. ಆದಷ್ಟು ಬೇಗ ತಪ್ಪಿತಸ್ಥರನ್ನು ಬಂಧಿಸಲು ತಕ್ಷಣ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ನಿಂಗಪ್ಪ ಹಳವಳ್ಳಿ, ನಾಗರಾಜ ಬಂಕಾಪುರ, ಹೊನ್ನಪ್ಪ ಕೊಳ್ಳವರ, ಶಿವಾನಂದ ಕರಿಗಾರ, ಬಸವಂತಪ್ಪ ಬಂಕಾಪೂರ, ಶ್ರೀಕಾಂತ ಅಜ್ಜಣ್ಣವರ, ಮಂಜುನಾಥ ಉಪ್ಪಿನ, ನಿಂಗಪ್ಪ ಜಡಿ, ರವಿ ಆಲದಕಟ್ಟಿ, ಮಹದೇವಪ್ಪ ಮಲ್ಲೂರ, ಸಿದ್ದಪ್ಪ ಡೊಳ್ಳಿನ, ಮಂಜುನಾಥ ಸರಸೂರಿ, ಗುಡ್ಡಪ್ಪ ತಿಮ್ಮಾಪುರ, ನೀಲಪ್ಪ ದೇವಗಿರಿ, ಗುರುನಾಥ ಕಳಲಕೊಂಡ, ಮಹೇಶ ಜಡಿ, ಮಂಜುನಾಥ ಪಾಟೀಲ, ಮಾಂತೇಶ ಆಲದಕಟ್ಟಿ, ನಿಂಗರಾಜ ಆಲದಕಟ್ಟಿ, ಪರಶುರಾಮ ಕುರಿ, ನಾಗಪ್ಪ ಗ್ವಾಡಿ ಹಾಗೂ ಇತರರು ಇದ್ದರು.
ಕೋಮುದಳ್ಳುರಿಗೆ ಪ್ರಚೋದನೆ ನೀಡಿ ಸಾಮಾಜಿಕ ಶಾಂತಿ ಕದಡುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿರುವ ಆರೋಪಿತನ ಮೇಲೆ ಹೆಚ್ಚುವರಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶಿವರಾಜ ಅಮರಾಪುರ ಹೇಳಿದರು.