ಕರವೇ ನಾರಾಯಣಗೌಡರ ಬಿಡುಗಡೆಗೆ ಆಗ್ರಹ

| Published : Jan 07 2024, 01:30 AM IST / Updated: Jan 07 2024, 12:24 PM IST

ಸಾರಾಂಶ

ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿದಂತೆ 50ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ರಾಜ್ಯ ಸರ್ಕಾರ ಬಂಧಿಸಿರುವ ಕ್ರಮ ಖಂಡಿಸಿ ಹಾಗೂ ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು.

ಹಾವೇರಿ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸೇರಿದಂತೆ 50ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ರಾಜ್ಯ ಸರ್ಕಾರ ಬಂಧಿಸಿರುವ ಕ್ರಮ ಖಂಡಿಸಿ ಹಾಗೂ ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಶನಿವಾರ ನಗರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸಿರುವುದು ಖಂಡನೀಯ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಲಾಯಿತು.

ಬಳಿಕ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಕರವೇ ಹೋರಾಟ ಮಾಡುತ್ತಿದೆ. ಬೆಂಗಳೂರಿನಲ್ಲಿ ಅಂಗಡಿ ಮುಗ್ಗಟ್ಟು, ಮಾಲ್‌ಗಳು ಸಂಪೂರ್ಣ ಆಂಗ್ಲ ಭಾಷೆಯಲ್ಲಿ ನಾಮಫಲಕ ಬರಿಸಿಕೊಂಡು ಕನ್ನಡಿಗರಿಗೆ ಉದ್ಯೋಗ ಕೊಡದೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದವು.

ಇಂಥವರ ವಿರುದ್ಧ ಸಮರ ಸಾರಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರು ಕನ್ನಡ ಜಾಗೃತಿ ಅಭಿಯಾನ ಪ್ರಾರಂಭಿಸಿದರು. ಆದರೆ ಸರ್ಕಾರ ಅನುಮತಿ ಕೊಟ್ಟು ಪೊಲೀಸ್ ಇಲಾಖೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿಕೊಟ್ಟು ಸರ್ಕಾರ ಮಾಡುವ ಕೆಲಸ ರಕ್ಷಣಾ ವೇದಿಕೆ ಮಾಡಿತು. ಇದರ ಅರಿವಿದ್ದರೂ ಸಹ ನಾಳೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ನಾರಾಯಣ ಗೌಡರನ್ನ ಬಂಧಿಸಿ 10 ದಿನ ಕಳೆದಿದೆ. 

ಸರ್ಕಾರ ಕುಂಟು ನೆಪ ಹೇಳಿಕೊಂಡು ಕಾಲ ಕಳೆಯುತ್ತಿದೆ. ಈಗಲಾದರೂ ಸರ್ಕಾರ ರಾಜ್ಯದಲ್ಲಿರುವ ರೈತಪರ ಕನ್ನಡ ಹೋರಾಟಗಾರರ ಎಲ್ಲ ಕೇಸ್‌ ವಾಪಸ್ ಪಡೆಯಬೇಕು. ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಸರ್ಕಾರದ ಆದೇಶದಂತೆ ಶೇ. 60ರಷ್ಟು ಕನ್ನಡದಲ್ಲಿ ನಾಮಫಲಕ ಅನುಷ್ಠಾನಕ್ಕೆ ತರಬೇಕು. ನಗರದಲ್ಲಿ ಎಲ್ಲ ನಾಮಫಲಕಗಳು, ಜಾಹೀರಾತು ಫಲಕಗಳು, ಪೆಟ್ರೋಲ್ ಬಂಕ್ ನಾಮಫಲಕಗಳು ಶಾಲಾ ಕಾಲೇಜು ಸಂಸ್ಥೆಗಳು ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗುಡಮಿ, ಹಾಲೇಶ ಹಾಲಣ್ಣನವರ, ಮಾರುತಿ ಪೂಜಾರ, ಸಿಕಂದರ್ ಓಲೇಕಾರ, ಶೋಭಾ ಹೊನ್ನಾಳಿ, ನಾಗೇಶ ಪೂಜಾರ, ಹಸನ ಹತ್ತಿಮತ್ತುರ, ಅಬ್ಬು ಕೋಡಮಗ್ಗಿ, ಸತ್ಯವತಿ ಕಡೆರ, ಗೌಸಪಾಕ ಬಾಲೆಬಾಯಿ, ಯಲ್ಲಪ ಚಿಕ್ಕಣ್ಣವರ, ಈರಣ್ಣ ಅರಳಿ, ಲಕ್ಷ್ಮೀಕಾಂತಪ್ಪ, ಬಸವರಾಜ, ಮಂಜು ಕಾಯಕದ, ನಾಗರಾಜ ಹರಿಜನ, ನಾಗರಾಜ ದೇಸಾಯಿ ಇತರರು ಇದ್ದರು.