ಸಾರಾಂಶ
ಜಗಳೂರು ಪಟ್ಟಣದ ರಸ್ತೆಗಳನ್ನು ಅಗಲೀಕರಣ ಮಾಡುವ ಮೂಲಕ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡ ಸ್ವಾಮಿ ಬಣ)ದಿಂದ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಜಗಳೂರು
ಜಗಳೂರು ಪಟ್ಟಣದ ಮುಖ್ಯರಸ್ತೆ, ರಿಂಗ್ ರಸ್ತೆ , ಭರಮಸಮುದ್ರ, ದೊಣೆಹಳ್ಳಿ ಕೂಡು ರಸ್ತೆಗಳನ್ನು ಅಗಲೀಕರಣ ಮಾಡುವ ಮೂಲಕ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡ ಸ್ವಾಮಿ ಬಣ) ವತಿಯಿಂದ ತಾಲೂಕು ಅಧ್ಯಕ್ಷ ಬಸವರಾಜಪ್ಪ ನೇತೃತ್ವದಲ್ಲಿ ರೈತರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.ತಾಲೂಕು ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಜಗಳೂರು ಪಟ್ಟಣ ಬೆಳೆಯುತ್ತಿದ್ದು, ರಸ್ತೆಗಳು ಬಹಳ ಇಕ್ಕಟ್ಟಿನ ಸ್ಥಿತಿಯಲ್ಲಿ ಓಡಾಡುವಂತಾಗಿದ್ದು, ಕಿರಿದಾದ ರಸ್ತೆಯಿಂದ ಅನೇಕ ಅಪಘಾತಗಳು ಸಂಭವಿಸಿವೆ. ಈಗಾಗಲೇ ಜಗಳೂರು ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುತ್ತಿರುವ ಚಳ್ಳಕೆರೆ-ದಾವಣಗೆರೆ ರಸ್ತೆ ಹಾಗೂ ಜಗಳೂರು ಪಟ್ಟಣದ ಹೊರವಲಯದಲ್ಲಿ ನೂತನವಾಗಿ ಸರ್ವೇ ಆಗಿರುವ ರಿಂಗ್ ರಸ್ತೆ, ಬೇಡರ ಕಣ್ಣಪ್ಪ ಶಾಲೆ ಹಾಗೂ ಮರೇನಹಳ್ಳಿ ರಸ್ತೆ ಬಳಸಿಕೊಂಡು, ಎಪಿಎಂಸಿ ಸಮೀಪ ವೇಣುಗೋಪಾಲರೆಡ್ಡಿ ಲೇಔಟ್ 100 ಫೀಟ್, ಹಾಗೂ ಭರಮಸಮುದ್ರ-ದೊಣೆಹಳ್ಳಿ ಕೂಡು ರಸ್ತೆಗಳನ್ನು (ಮೇಲು ಸೇತುವೆ ಮತ್ತು ಪಕ್ಕದ ಉಪಮಾರ್ಗಗಳು)ಶೀಘ್ರವಾಗಿ ಅಭಿವೃದ್ಧಿ ಪಡಿಸಿ ಕಾಮಗಾರಿ ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಹಾಗು ಸದರಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ವಿಶಾಲವಾಗಿ ಹೋಗಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ನಾಯಕ ಟಿ, ಜಂಟಿ ಕಾರ್ಯದರ್ಶಿ ಕುಮಾರ್ ಬಿ, ಆರ್.ಜಯರಾಮಪ್ಪ, ಗುರುಸಿದ್ದಪ್ಪ, ಉಪಾಧ್ಯಕ್ಷ ಲೋಕಣ್ಣ, ಸತೀಶ್, ಓಬಯ್ಯ, ಮಾರಪ್ಪ, ಜಯ್ಯಪ್ಪ, ಭರಮಪ್ಪ, ಪಾಲನಾಯಕ, ಜಯ್ಯಪ್ಪ, ಶಿವಣ್ಣ, ರಾಜ, ಡಿ.ಎಸ್.ಎಸ್. ಸಂಚಾಲಕ ಕುಬೇಂದ್ರಪ್ಪ, ಪಾಂಡುರಂಗ, ಚೌಡಪ್ಪ, ಮಂಜಪ್ಪ, ರಂಗಪ್ಪ ಸೇರಿ ಇತರರು ಇದ್ದರು.