ಕನ್ನಡಪ್ರಭ ವಾರ್ತೆ ಹೊಸನಗರ
ಹೊಸನಗರಕ್ಕೆ ಸ್ವತಂತ್ರ ವಿಧಾನಸಭಾ ಕ್ಷೇತ್ರದ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಇದರ ಅಂಗವಾಗಿ ಭಾನುವಾರ ಆಯೋಜಿಸಿದ್ದ ಐತಿಹಾಸಿಕ ಪಾದಯಾತ್ರೆಗೆ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ನಗರ ಹೋಬಳಿ ಸಾಕ್ಷಿಯಾಯಿತು.ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆ ಹೋರಾಟ ಸಮಿತಿ ವತಿಯಿಂದ ಹೊಸನಗರ ತಾಲೂಕಿನ ನಗರದಿಂದ ರಿಪ್ಪನ್ ಪೇಟೆಯವರೆಗೆ ಪಾದಯಾತ್ರೆ ಆಯೋಜಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಹೊಸನಗರದ ಮೂಲಗದ್ದೆ ಮಠದ ಅಭಿನವ ಶ್ರೀ ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಬಿ ಸ್ವಾಮಿರಾವ್, ಜಿ.ಪಂ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್, ಶಾಸಕರುಗಳಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್ ಸೇರಿದಂತೆ ಹಲವಾರು ಮುಖಂಡರು ಪಕ್ಷಬೇದ ಮರೆತು ಉರಿ ಬಿಸಿನಲ್ಲಿ ಹೆಜ್ಜೆ ಹಾಕಿದರು.ಪಾದಯಾತ್ರೆಯುದ್ದಕ್ಕೂ ''''''''ನಮಗೆ ಬೇಕೇ ಬೇಕು...ಹೊಸನಗರ ವಿಧಾನ ಸಭಾ ಕ್ಷೇತ್ರ ಬೇಕು " ಎಂಬ ಘೋಷಣೆಯನ್ನು ಕೂಗಿದರು.
5 ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಾ ಬಂದಿದೆ. ಹೀಗಾಗಿ
ಅಭಿವೃದ್ಧಿಗೆ ಕ್ಷೇತ್ರ ಬೇಕು, ಪ್ರಶ್ನಿಸಲು ಕ್ಷೇತ್ರ ಬೇಕು, ವಿಧಾನಸಭೆಯಲ್ಲಿ ಧ್ವನಿ ಎತ್ತಲು ಕ್ಷೇತ್ರ ಬೇಕು. ನಮ್ಮ ಅಸ್ತಿತ್ವಕ್ಕಾಗಿ ಆದರೂ ಕ್ಷೇತ್ರ ಬೇಕು ಎಂದು ಜಾತಿ-ಮತ-ಧರ್ಮ-ಪಕ್ಷಗಳನ್ನು ಮರೆತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಪಾನೀಯ ವ್ಯವಸ್ಥೆ: ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಬೆಳಿಗ್ಗೆ ತಿಂಡಿಯ ಜೊತೆ ಪಾನೀಯ ವ್ಯವಸ್ಥೆಯನ್ನು ಹೋರಾಟ ಸಮಿತಿಯವರು ಆಯೋಜಿಸಿದ್ದರು. ರಸ್ತೆ ಮಧ್ಯಕ್ಕೆ ಐಸ್ ಕ್ರೀಂ ವಿತರಣೆಯನ್ನು ಮಾಡಲಾಯಿತು.ಪಾದಯಾತ್ರೆಗೆ ಯುವಬಲ: ಹೊಸನಗರ ತಾಲೂಕಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಬೇಕು ಎಂಬ ಕೂಗಿಗೆ ಯುವಕ-ಯುವತಿಯರು ಸಾಥ್ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ಯುವಕ ಯುವತಿಯರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅಲ್ಲದೇ ವಿವಿಧ ಸಂಘ ಸಂಸ್ಥೆಗಳು, ನಿವೃತ್ತ ಯೋಧರು ಪಾದಯಾತ್ರೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಬಲ ತುಂಬಿದರು.
ಪಾದಯಾತ್ರೆಯಲ್ಲಿ ಭಾಗಿಯಾದವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪಾದಯಾತ್ರೆಯಿಂದ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.ಭಾನುವಾರ ಆರಂಭವಾದ ಪಾದಯಾತ್ರೆ ಹೊಸನಗರ ತಲುಪಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದೆ. ಏ 6ರಂದು ಬೆಳಗ್ಗೆ ಪಾದಯಾತ್ರೆ ಪುನಃ ಪ್ರಾರಂಭವಾಗಿ ಅದೇ ದಿನ ಸಂಜೆ ರಿಪ್ಪನ್ಪೇಟೆ ತಲುಪಲಿದೆ. ಅಂದು 4 ಗಂಟೆಗೆ ರಿಪ್ಪನ್ಪೇಟೆ ಹೈಸ್ಕೂಲ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ.