ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮಲ್ಲೇಪುರ ಗ್ರಾಮದ ಸರ್ವೆ ನಂ. ೫೦ರ ಗೋಮಾಳ ಜಮೀನನ್ನು ದರಖಾಸ್ತು ಪೋಡಿ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಿ ಯಥಾಸ್ಥಿತಿ ಕಾಪಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಬಹುಜನ ಸಮಾಜ ಪಾರ್ಟಿಯ ತಾಲೂಕು ಅಧ್ಯಕ್ಷ ಎಂ.ಡಿ ರಾಮಾಂಜಿನಪ್ಪ ತಿಳಿಸಿದರು.

ಮಲ್ಲೇಪುರ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್‌ ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಮಲ್ಲೇಪುರ ಗ್ರಾಮದ ಸರ್ವೆ ನಂ.೫೦ರ ಗೋಮಾಳ ಜಮೀನಿನಲ್ಲಿ ಸಾಗುವಳಿ ಪಡೆದುಕೊಂಡು ಕಾನೂನು ಬದ್ದವಾಗಿ ಕೆಲವರು ಖಾತೆ ಮಾಡಿಸಿಕೊಂಡು ಸ್ವಾಧೀನಾನುಭವದಲ್ಲಿ ಇದ್ದಾರೆ. ಕೆಲ ಭೂಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಗ್ರಾಮಸ್ಥರಿಗೆ ಮೋಸ ಮಾಡುವ ದುರುದ್ದೇಶದಿಂದ ಅಧಿಕಾರಿಗಳಿಗೂ ದಿಕ್ಕು ತಪ್ಪಸಿ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಅಕ್ರಮ ಪೋಡಿ ಮಾಡಿಸುವ ಸಲುವಾಗಿ ಷಡ್ಯಂತರ ಮಾಡುತ್ತಿದ್ದಾರೆ. ತಹಸೀಲ್ದಾರರು ಮಲ್ಲೇಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು. ಈ ಅಕ್ರಮ ಪೋಡಿ ದುರಸ್ತಿ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಅಕ್ರಮ ಭೂಗಳ್ಳರಿಂದ ಸರ್ಕಾರಿ ಗೋಮಾಳ ಜಮೀನು ಗ್ರಾಮಕ್ಕೆ ಉಳಿಸಬೇಕು. ಗ್ರಾಮದ ಭೂ ರಹಿತರನ್ನು ಗುರುತಿಸಿ ಅರ್ಹರಿಗೆ ಜಮೀನು ನೀಡಬೇಕು ಎಂದು ಹೇಳಿದರು.

ಅಂಬೇಡ್ಕರ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಮಲ್ಲೇಪುರ ಗ್ರಾಮದ ಸರ್ವೆ ನಂ೫೦ರಲ್ಲಿ ಸುಮಾರು ೧೫ ಎಕರೆ ಗೋಮಾಳ ಜಮೀನು ಇದ್ದು ಆ ಜಮೀನಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮಲ್ಲೇಪುರ ಗ್ರಾಮದ ಜಮೀನನ್ನು ಪಕ್ಕದ ಗ್ರಾಮದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಭೂಮಿ ಕಬಳಿಸಲು ಮುಂದಾಗಿದ್ದಾರೆ. ಉಳುವವನೆ ಭೂಮಿ ಒಡೆಯ ಎಂದು ಸರ್ಕಾರ ಕೊಟ್ಟಂತಹ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ. ಕುಟುಂಬ ಸದಸ್ಯರಿಗೆ ತಲಾ ೪-೫ ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಮಲ್ಲೇಪುರ ಗ್ರಾಮಸ್ಥರನ್ನು ಬಿಟ್ಟು ಗ್ರಾಮಸ್ಥರಲ್ಲದ ಒಂದೇ ಕುಟುಂಬಕ್ಕೆ ೧೫ ಎಕರೆ ಜಮೀನು ಪೋಡಿ ಮಾಡಲು ಮುಂದಾಗಿದ್ದಾರೆ. ಪೋಡಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಉಗ್ರ ಹೊರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಇದೆ ವೇಳೆ ಮಲ್ಲೇಪುರ ಭೂ ಹೋರಾಟ ಸಮಿತಿ ಪದಾಧಿಕಾರಿಗಳಾದ ಮುನಿಶಾಮಪ್ಪ, ಮುನಿರಾಜಪ್ಪ, ಮುನಿಯಪ್ಪ, ವೆಂಕಟೇಶ್, ನರಸಿಂಹಮೂರ್ತಿ, ಕೃಷ್ಣಪ್ಪ, ಮುನಿಆಂಜಿನಪ್ಪ, ಕದಿರಪ್ಪ, ಆದಿನಾರಾಯಣಸ್ವಾಮಿ, ಶ್ರೀನಿವಾಸ್.ಎಂ. ಶ್ರೀನಿವಾಸ್.ಎಂ.ಎಸ್, ಎಂ.ಜಿ.ನರಸಿಂಹಮೂರ್ತಿ, ಪುರುಷೋತ್ತಮ್ ಮುನಿಚಿನ್ನಪ್ಪ ಗ್ರಾಮಸ್ಥರು ಹಾಜರಿದ್ದರು.

೨೦ ದೇವನಹಳ್ಳಿ ಚಿತ್ರಸುದ್ದಿ:೦೧


ಮಲ್ಲೇಪುರ ಗ್ರಾಮದ ಗೋಮಾಳ ಜಮೀನು ದರಖಾಸ್ತು ಪೋಡಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ್‌ ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು.