ಸಾರಾಂಶ
ಹಿಂದೂ ಜಾಗೃತಿ ಸೇನೆ- ಮಡಿವಳ ಸಂಘದಿಂದ ಸರ್ಕಲ್ನಲ್ಲಿ ಪ್ರತಿಭಟನೆ ಮಾಡುತ್ತಲೇ ಕಿಡಿಗೇಡಿಗಳ ಭಾವಚಿತ್ರ ದಹಿಸಿ ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ಸರ್ಕಾರ, ಗೃಹ ಮಂತ್ರಿ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆಗಳು ಕೇಳಿ ಬಂದವು.
ಕನ್ನಡಪ್ರಭ ವಾರ್ತೆ ಕಲಬುರಗಿ
ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿರುವ ಸೇಡಂ ತಾಲ್ಲೂಕಿನ ದೇವನೂರ ಗ್ರಾಮದ ಅರ್ಜುನಪ್ಪ ಮಡಿವಾಳ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ನಗ್ನಗೊಳಿಸಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಈ ಪ್ರಕರಣದಲ್ಲಿ ಭಾಗಿಯಾದ 12 ಜನ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.
ಘಟನೆ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಹಿಂದೂ ಜಾಗೃತಿ ಸೇನೆ, ಮಡಿವಾಳ ಸಂಘದ ಕಾರ್ಯಕರ್ತರು ನೂರಾರು ಜನ ಸೇರಿದ್ದರು. ಸರ್ಕಲ್ನಲ್ಲಿ ಪ್ರತಿಭಟನೆ ಮಾಡುತ್ತಲೇ ಕಿಡಿಗೇಡಿಗಳ ಭಾವಚಿತ್ರ ದಹಿಸಿ ಆಕ್ರೋಶ ಹರಹಾಕಿದರು.ಕೃತ್ಯ ಎಸಗಿರೋ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಯಿತು. ಕಾಂಗ್ರೆಸ್ ಸರ್ಕಾರ, ಗೃಹ ಮಂತ್ರಿ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆಗಳು ಕೇಳಿ ಬಂದವು.
ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಉಪಾಧ್ಯಕ್ಷ ಸುನೀಲ ಶೀರ್ಕೆ, ಪ್ರಧಾನ ಕಾರ್ಯದರ್ಶಿ ಸಿದ್ದು ಕಂದಗಲ್, ದಶರಥ ಇಂಗಳೆ, ಮಹಾದೇವ ಕೋಟನೂರ, ರಾಜು ಸ್ವಾಮಿ, ರಾಜು ಕಮಲಾಪೂರೆ, ಸಂಗಮೇಶ ಕಾಳಗನೂರ, ಪ್ರಕಾಶ ವಾಘಮೋರೆ, ಚಿದಾನಂದ ಸ್ವಾಮಿ, ವಿಕಾಸ ಸಗರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.