ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಿಸದಂತೆ ಆಗ್ರಹಿಸಿ ತಾಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ನಾಗರಿಕರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಾಲೂಕು ಆಡಳಿತ ಗುರುತಿಸಿರುವ ಜಾಗೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಿಸದಂತೆ ಆಗ್ರಹಿಸಿ ತಾಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ನಾಗರಿಕರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಾಲೂಕು ಆಡಳಿತ ಗುರುತಿಸಿರುವ ಜಾಗೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ ವೃತ್ತ, ಮಹಾರಾಣಾ ಪ್ರತಾಪಸಿಂಹ್ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು. ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಬರೆದ ಮನವಿ ಪತ್ರವನ್ನು ಹೋರಾಟ ಸಮಿತಿ ಅಧ್ಯಕ್ಷ ಧಶರಥ್‌ಸಿಂಗ್ ಮನಗೂಳಿ ತಹಸೀಲ್ದಾರ್‌ ವಿನಯಾ ಹೂಗಾರಗೆ ಸಲ್ಲಿಸಿದರು.

ಸಮಿತಿ ಗೌರವ ಕಾರ್ಯದರ್ಶಿ ಆರ್.ಎಸ್.ಪಾಟೀಲ (ಕೂಚಬಾಳ) ಮಾತನಾಡಿ, ಸರ್ಕಾರಿ ಕಚೇರಿಗಳು ಪಟ್ಟಣದಲ್ಲಿದ್ದರೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಜನರಿಗೆ ಅನುಕೂಲವಾಗಲಿದೆ. ಆದರೆ ಮೈಲೇಶ್ವರ ಗ್ರಾಮಕ್ಕೆ ಹೊಂದಿಕೊಂಡು ಸುಮಾರು ೫ ಕಿ.ಮೀ ದೂರದಷ್ಟು ಇರುವ ಜಾಗೆಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಪ್ರಜಾಸೌಧ ನಿರ್ಮಾಣಕ್ಕೆ ಜಾಗೆಯನ್ನು ಯಾರೇ ದಾನವಾಗಿ ನೀಡಿದ್ರೂ ಆ ದಾನ ಸಾರ್ವಜನಿಕರಿಗೆ ಉಪಯೋಗಕ್ಕೆ ಬರಬೇಕು, ಅದನ್ನು ಬಿಟ್ಟು ಜನರಿಗೆ ತೊಂದರೆ ಆಗುತ್ತಿದ್ದರೆ ನೀಡಿದ ದಾನ ವ್ಯರ್ಥವಾಗಲಿದೆ ಎಂದರು.

ಈ ಪ್ರಜಾಸೌಧದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ನಡೆಯುವುದರಿಂದ ನಿತ್ಯ ಯಾವುದೇ ಕೆಲಸಕ್ಕೆ ಹೋಗಬೇಕೆಂದರೂ ೪, ೫ ಕಿ.ಮೀ ಕ್ರಮಿಸಬೇಕು. ಇದರಿಂದ ಸಮಯ ಹಾಳು, ಪ್ರಯಾಣಕ್ಕೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಈ ಅಂಶಗಳನ್ನು ತಾಲೂಕು ಆಡಳಿತ ಪರಿಗಣಿಸಬೇಕು. ಕೂಡಲೇ ಶಾಸಕರು ಪಟ್ಟಣದಲ್ಲೇ ಸೂಕ್ತ ಜಾಗೆ ಗುರುತಿಸಬೇಕು. ಸದ್ಯ ನಿಗದಿಪಡಿಸಿದ ಜಾಗೆ ರದ್ದುಪಡಿಸಬೇಕು ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಸಮಿತಿ ಹಿರಿಯ ಸದಸ್ಯ ವಿಜಯಸಿಂಗ್ ಹಜೇರಿ ಮಾತನಾಡಿ, ಯಾರದೋ ಒತ್ತಡಕ್ಕೆ ಮಣಿದು ಜನರಿಗೆ ತೊಂದರೆಯಾಗುವ ರೀತಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಬಾರದು. ಕೂಡಲೇ ನಿಗದಿ ಪಡಿಸಿದ ಜಾಗೆ ರದ್ದು ಪಡಿಸಿ, ಪಟ್ಟಣದಲ್ಲಿ ಪರಿಶೀಲಿಸಿರುವ ನಾಲ್ಕೈದು ಜಾಗೆಗಳಲ್ಲಿ ಸೂಕ್ತ ಜಾಗೆ ಗುರುತಿಸಿ ಪ್ರಜಾಸೌಧ ನಿರ್ಮಿಸಬೇಕೆಂದರು.

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಮುರಾಳ, ಸಹ ಕಾರ್ಯದರ್ಶಿ ರವಿ ಕಟ್ಟಿಮನಿ, ಜೈಭೀಮ ಮುತ್ತಗಿ ಮಾತನಾಡಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಧಶರಥ್‌ಸಿಂಗ್ ಮನಗೂಳಿ, ಉಪಾಧ್ಯಕ್ಷ ಮುತ್ತಪ್ಪಣ್ಣ ಚಮಲಾಪೂರ, ಮಾಸುಮಸಾಬ ಕೆಂಭಾವಿ, ವಾಸುದೇವ ಹೆಬಸೂರ, ಎಂ.ಎಸ್.ಸರಶೆಟ್ಟಿ, ಕಳಕೂಸಾ ರಂಗ್ರೇಜ್, ಕೆ.ಸಿ.ಸಜ್ಜನ, ನಾಗೇಶ ಕಟ್ಟಿಮನಿ, ಪ್ರಕಾಶ ಹಜೇರಿ, ಮೈಹಿಬೂಬ ಚೋರಗಸ್ತಿ, ಅಮೀತಸಿಂಗ್ ಮನಗೂಳಿ, ಮಾನಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ಆರ್.ಕೆ.ಅಗರವಾಲಾ, ಆರ್.ಎಲ್.ಕೊಪ್ಪದ, ರಾಜು ಹಂಚಾಟೆ, ಡಾ.ಎ.ಎ.ನಾಲಬಂದ, ಡಾ.ಆನಂದ ಬಟ್, ಪ್ರಲ್ಹಾದಸಿಂಗ್ ಹಜೇರಿ, ಮಹೇಶ ಚಲವಾದಿ, ಗುರುರಾಜ ಮಾನೆ, ಸುರೇಶ ಹಜೇರಿ, ಶ್ರೀಪಾದ ಸಂಗ್ಮೀ, ಸಿರಸಕುಮಾರ ಹಜೇರಿ, ಶರಣಗೌಡ ಪಾಟೀಲ, ಮಂಜು ಶೆಟ್ಟಿ, ಮೋಹನ್ ಬಡಿಗೇರ, ನೀತಿನ ಹಜೇರಿ, ರಾಘು ಹಜೇರಿ, ಮುತ್ತು ಕಶೆಟ್ಟಿ, ಅಶೋಕ ಚಿನಗುಡಿ, ರಾಮಣ್ಣ ಕಟ್ಟಿಮನಿ, ಸಂಜೀವ ಬರದೇನಾಳ ಮೊದಲಾದವರಿದ್ದರು.