ಮತಾಂಧರನ್ನು ಮಟ್ಟಹಾಕಲು ಆಗ್ರಹ

| Published : Jan 06 2025, 01:00 AM IST

ಸಾರಾಂಶ

ಜಗಳ ಬಿಡಿಸಲು ಬಂದ ದಲಿತ ಯುವಕ ಮಂಜುನಾಥ ಬಂಡಿವಡ್ಡ ಅವರ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಇಂತಹ ಘಟನೆಗಳನ್ನು ಖಂಡಿಸುತ್ತೇವೆ

ಗದಗ: ನಗರದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಪಕ್ಷವಾಗಿರುವ ಎಸ್‌ಡಿಪಿಐ ಪ್ರಮುಖರ ಕುಮ್ಮಕ್ಕಿನಿಂದ ಹಿಂದೂಗಳ ಮೇಲೆ ಹಲ್ಲೆ, ಗೋ ಹತ್ಯೆ, ಮತಾಂತರ, ಲವ್‌ ಜಿಹಾದ್‌ಗೆ ಪ್ರಚೋದನೆ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಗದಗ ನಗರದ ಜೋಡು ಮಾರುತಿ ದೇವಸ್ಥಾನದ ಹತ್ತಿರ ಕ್ಷುಲ್ಲಕ ಕಾರಣಕ್ಕೆ ನಾಲ್ವರು ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕೃತ್ಯ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಪ್ರಕರಣ ಆಗಿದ್ದನ್ನು ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ. 2024 ಡಿ. 26ರಂದು ನಗರದ ಅನಿಲ ಮುಳ್ಳಾಳ ಹಾಗೂ ಸಹೋದರರು ತಮ್ಮ ಸಹೋದರಿಗೆ ಚುಡಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ನೆಪದಲ್ಲಿ 10-20 ಮತಾಂಧರು ಒಟ್ಟಾಗಿ ದಾಳಿ ಮಾಡಿದ್ದಾರೆ. ಅನಿಲ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು. ಅದೇ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ದಲಿತ ಯುವಕ ಮಂಜುನಾಥ ಬಂಡಿವಡ್ಡ ಅವರ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಇಂತಹ ಘಟನೆಗಳನ್ನು ಖಂಡಿಸುತ್ತೇವೆ ಎಂದು ಹೇಳಿದರು.ಜಿಲ್ಲೆಯಲ್ಲಿ ಕೋಮುದಳ್ಳುರಿ ಸೃಷ್ಟಿಸಿ, ತನ್ನ ಪ್ರಭಾವ ಬೀರಲು ಹೊರಟಿರುವ ಎಸ್‌ಡಿಪಿಐ ಪ್ರಮುಖರನ್ನು ಬಂಧಿಸಿ ಉಗ್ರ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಮಠ, ಮಂದಿರಗಳಿಗೆ ಮತ್ತು ಹಿಂದೂ ಯುವತಿಯರಿಗೆ ಇಂಥ ಮತಾಂಧ ಶಕ್ತಿಗಳಿಂದ ರಕ್ಷಣೆ ನೀಡಬೇಕು. ಈ ತರಹದ ಘಟನೆಗಳು ಮುಂದುವರಿದಲ್ಲಿ ಜಾಗ್ರತ ಹಿಂದೂ ಸಮಾಜ ತಕ್ಕ ಉತ್ತರ ನೀಡುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ರಾಣಿ ಆರ್. ಚಂದಾವರಿ, ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ, ಕೋಶಾಧ್ಯಕ್ಷ ಮಾರುತಿ ಪವಾರ, ವೀರೇಶ ಮಡಿವಾಳರ, ಪರಶುರಾಮ ಬಾವಿಕಟ್ಟಿ, ಪ್ರಸಾದ ಬಡಿಗೇರ, ಪ್ರಮೋದ ಚವ್ಹಾಣ, ಅಶೋಕ ಜಕ್ಕಲಿ, ನಾಗರಾಜ ಜಾಡರ ಹಾಗೂ ಬಜರಂಗದಳದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.