ತಾಲೂಕಿನ ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಜಮೀನುಗಳಲ್ಲಿ ತೇವಾಂಶದ ಕೊರತೆ ಉಂಟಾಗಿದೆ.

ಶಿರಹಟ್ಟಿ: ವಾಡಿಕೆಗಿಂತ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಮಳೆಯನ್ನೇ ಆಶ್ರಯಿಸಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿವೆ. ಸರ್ಕಾರ ಇದುವರೆಗೆ ಶಿರಹಟ್ಟಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಅಶೋಕ ಹುಬ್ಬಳ್ಳಿ ಆರೋಪಿಸಿದರು.ಸಂಘಟನೆ ವತಿಯಿಂದ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ, ಜಮೀನುಗಳಲ್ಲಿ ತೇವಾಂಶದ ಕೊರತೆ ಉಂಟಾಗಿದೆ. ಬಿತ್ತನೆ ಸಂದರ್ಭದಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಬೀಜ, ರಸಗೊಬ್ಬರ, ಔಷಧಿ ಸೇರಿದಂತೆ ವಿವಿಧ ಕೃಷಿ ಪರಿಕರಗಳಿಗೆ ಹಣ ವ್ಯಯಿಸಿದ್ದರು. ಆದರೆ ನಂತರ ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಮೊಳಕೆಯ ಹಂತದಲ್ಲಿಯೇ ಹಾನಿಗೊಳಗಾಗಿದ್ದು, ಕೆಲವು ಕಡೆ ಬೆಳೆ ಬೆಳೆದು ನಿಂತಿದ್ದರೂ ನೀರಿನ ಕೊರತೆಯಿಂದ ಒಣಗುತ್ತಿವೆ ಎಂದರು.ನಂತರ ಶಿರಸ್ತೇದಾರ ಎಚ್.ಜೆ. ಬಾವಿಕಟ್ಟಿ, ಸಂತೋಷ ಅಸ್ಕಿ ಅವರ ಮೂಲಕ ಮನವಿ ಸಲ್ಲಿಸಿದರು. ಎ.ಬಿ. ಹೆಸರೂರ, ರವಿ ಲಮಾಣಿ, ಅವಿನಾಶ ಲಮಾಣಿ, ಲಿಂಬಣ್ಣ ಲಮಾಣಿ, ಢಾಕಪ್ಪ ಗೂರಪ್ಪ ಲಮಾಣಿ, ಪರಶುರಾಮ ಹುಬ್ಬಳ್ಳಿ, ಪವನ ಹುಬ್ಬಳ್ಳಿ, ಸುಭಾಸ ಅಂಬಿಗೇರ ಇತರರು ಇದ್ದರು. ನಿರಂತರ ಪರಿಶ್ರಮದಿಂದ ಉನ್ನತಿ

ಮುಳಗುಂದ: ಸಮಯ, ಶ್ರಮ ಮತ್ತು ಹಣ ಪ್ರಮುಖ ಆರ್ಥಿಕ ಸಂಪನ್ಮೂಲಗಳಾಗಿದ್ದು, ಇವುಗಳನ್ನು ಸರಿಯಾಗಿ ಬಳಸಿಕೊಳ್ಳುವ ವ್ಯಕ್ತಿಯು ನಿರಂತರವಾಗಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಾನೆ. ಪದವಿಗಳು ನಮ್ಮನ್ನು ಉದ್ಯೋಗಕ್ಕೆ ಸೇರಿಸಿದರೆ ನಿರಂತರ ಪರಿಶ್ರಮ ನಮ್ಮನ್ನು ಉನ್ನತಿಗೆ ಏರಿಸುತ್ತವೆ ಎಂದು ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾ. ಡಾ. ಆರ್.ಎಂ. ಕಲ್ಲನಗೌಡರ ಹೇಳಿದರು.ಸ್ಥಳೀಯ ಆರ್.ಎನ್‌. ದೇಶಪಾಂಡೆ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿನ ಪ್ರಾವಿಣ್ಯತೆ, ಕೌಶಲ್ಯಗಳು, ವೃತ್ತಿ ಅವಕಾಶಗಳು ಎಂಬ ವಿಷಯವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿ, ಪ್ರಾಧ್ಯಾಪಕ ಡಾ. ಕಲಕನಗೌಡ ಪೊಲೀಸಪಾಟೀಲ ಅವರು, ಅರ್ಥಶಾಸ್ತ್ರ ಪದವೀಧರರಿಗೆ ಹಲವಾರು ವೃತ್ತಿ ಅವಕಾಶಗಳಿದ್ದು, ಅವುಗಳ ಸದುಪಯೋಗಕ್ಕಾಗಿ ಬೆಳೆಸಿಕೊಳ್ಳಬೇಕಾದ ಕೌಶಲ್ಯಗಳನ್ನು ಕುರಿತು ವಿವರವಾಗಿ ಉಪನ್ಯಾಸ ನೀಡಿದರು.ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಸವರಾಜ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಐಕ್ಯುಎಸಿ ಸಂಚಾಲಕ ನಾಗರಾಜ ಎ. ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರಾಜು ಬಿ.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ನಾಯ್ಕರ್ ನಿರೂಪಿಸಿದರು.