ಕನಿಷ್ಠ ವೇತನ ನಿಗದಿ ಮಾಡಲು ಆಗ್ರಹ

| Published : Jan 24 2024, 02:01 AM IST

ಸಾರಾಂಶ

ಬಡವರ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ.

ಹೊಸಪೇಟೆ: ಈ ಬಾರಿಯ ಬಜೆಟ್‌ನಲ್ಲಿ ಐಸಿಡಿಎಸ್ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನ ಘೋಷಣೆ ಮಾಡುವಂತೆ ಆಗ್ರಹಿಸಿ ಸಿಐಟಿಯು ಸಂಘಟನೆ ವತಿಯಿಂದ ಸಹಸ್ರಾರು ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಕ್ಕಳು ಮತ್ತು ಮಹಿಳೆಯರಿಗಾಗಿ ನೀಡುವ ಸವಲತ್ತುಗಳಿಗೆ ಶೇ. ೯೦ರಿಂದ ಶೇ. ೬೦ರಷ್ಟು ಪಾಲನ್ನು ಕೇಂದ್ರ ಸರ್ಕಾರವು ಕಡಿತ ಮಾಡಿದೆ. ೨೦೨೧ರ ಬಜೆಟ್‌ನಲ್ಲಿ ₹೮೫೪೨ ಕೋಟಿಗಳನ್ನು ಕಡಿತ ಮಾಡಿದೆ. ಇದರಿಂದ ದೇಶದ ೧೧ರಿಂದ ೧೨ ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳಿಗೆ ₹೧೪.೫ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಶತಕೋಟಿ ಶ್ರೀಮಂತರಿಗೆ ಶೇ. ೨ರಷ್ಟು ವಿಶೇಷ ತೆರಿಗೆಯನ್ನು ವಿಧಿಸಿದರೆ ₹೧೩೪ ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಬರುತ್ತದೆ. ಇದರಿಂದ ಗುಣಮಟ್ಟದ ಆಹಾರ, ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡಬಹುದು. ಅಲ್ಲದೇ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಕೊಡಲು ಸಾಧ್ಯವಾಗುತ್ತದೆ ಎಂದರು.

ಬಡವರ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ಹಾಕಲಿ. ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ₹೪೫೦೦, ಸಹಾಯಕಿಯರಿಗೆ ₹೨೨೫೦, ಬಿಸಿಯೂಟದವರಿಗೆ ₹೬೦೦, ಆಶಾ ಕಾರ್ಯಕರ್ತೆರಿಗೆ ₹೨ ಸಾವಿರ ನೀಡಿ ದುಡಿಸಿಕೊಳ್ಳುತ್ತಿದೆ ಎಂದರು.

ಮುಖಂಡರಾದ ಆರ್.ಎಸ್. ಬಸವರಾಜ್, ಅಂಜಲಿ ಬೆಳಗಲ್, ಕೆ. ನಾಗರತ್ಮ, ಕೆ.ಎಂ. ಸ್ವಪ್ನ, ಎಸ್. ಜಗ್ನಾನಾಥ, ಆರ್. ಭಾಸ್ಕರ್ ರೆಡ್ಡಿ, ಮಾರೆಕ್ಕ, ಜ್ವಲಜಾ ಇತರರಿದ್ದರು.