ಮೊಬೈಲ್ಗೆ ಹಾಕಿದ ಕರೆನ್ಸಿಗಳು ವ್ಯರ್ಥವಾಗುತ್ತಿವೆ. ಯಾರೊಂದಿಗೂ ಸಮರ್ಪಕವಾಗಿ ಮಾತನಾಡಲಾಗುತ್ತಿಲ್ಲ. ಈಗೀಗ ನೆಟ್ವರ್ಕ್ ಕಂಪನಿಯ ಅಧಿಕಾರಿಗಳು ಬೇರೆಯದಕ್ಕೆ ಪೋರ್ಟ್ ಮಾಡಿಕೊಳ್ಳಿ ಎಂದು ಉಡಾಫೆಯ ಮಾತನಾಡುತ್ತಾರೆ ಎಂಬುದು ಜನರ ಸಂಕಟಕ್ಕೆ ಕಾರಣವಾಗಿದೆ.
ಕುಮಟಾ: ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ತಾಲೂಕಿನ ಬಾಡ ಗುಡೇಅಂಗಡಿಯಲ್ಲಿರುವ ಬಿಎಸ್ಎನ್ಎಲ್ ಹಾಗೂ ಜಿಯೊ ಮೊಬೈಲ್ ಸಿಗ್ನಲ್ ಸೇವಾ ಟವರ್ಗಳ ಸೇವಾ ವೈಫಲ್ಯತೆಯಿಂದ ಹೈರಾಣಾಗಿರುವ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಗುಡೇಅಂಗಡಿಯ ಶ್ರೀಕಾಂಚಿಕಾಂಬಾ ಮಂದಿರದ ಬಳಿ ಕಾರ್ಯಾಚರಿಸುತ್ತಿರುವ ಮೊಬೈಲ್ ಟವರ್ನಿಂದ ಬಿಎಸ್ಎನ್ಎಲ್ ಹಾಗೂ ಜಿಯೋ ನೆಟ್ವರ್ಕ್ ಸೇವೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಸುಮಾರು ಒಂದು ವರ್ಷದಿಂದ ಇಲ್ಲಿನ ನೆಟ್ವರ್ಕ ಸೇವೆ ಸರಿಯಾಗಿಲ್ಲ. ಕಳೆದ ನಾಲ್ಕುತಿಂಗಳಿಂದ ಸಂಪೂರ್ಣವಾಗಿ ಎರಡೂ ನೆಟ್ವರ್ಕಗಳು ಕುಂಠಿತಗೊಂಡಿದ್ದು, ಕೇಳಿದರೆ ಅಂಟೆನಾ ದುರಸ್ತಿಯಾಗಬೇಕು ಎನ್ನುತ್ತಾರೆ. ಆದರೆ ಸರಿಪಡಿಸುತ್ತಿಲ್ಲ. ಜನರ ದೂರಿಗೆ ಬಿಎಸ್ಎನ್ಎಲ್ನವರಾಗಲೀ, ಜಿಯೋದವರಾಗಲೀ ಎಳ್ಳಷ್ಟೂ ಕಾಳಜಿ ತೋರುತ್ತಿಲ್ಲ.ಮೊಬೈಲ್ಗೆ ಹಾಕಿದ ಕರೆನ್ಸಿಗಳು ವ್ಯರ್ಥವಾಗುತ್ತಿವೆ. ಯಾರೊಂದಿಗೂ ಸಮರ್ಪಕವಾಗಿ ಮಾತನಾಡಲಾಗುತ್ತಿಲ್ಲ. ಈಗೀಗ ನೆಟ್ವರ್ಕ್ ಕಂಪನಿಯ ಅಧಿಕಾರಿಗಳು ಬೇರೆಯದಕ್ಕೆ ಪೋರ್ಟ್ ಮಾಡಿಕೊಳ್ಳಿ ಎಂದು ಉಡಾಫೆಯ ಮಾತನಾಡುತ್ತಾರೆ ಎಂಬುದು ಜನರ ಸಂಕಟಕ್ಕೆ ಕಾರಣವಾಗಿದೆ. ಹೀಗಾಗಿ ಭಾನುವಾರ ಗುಡೇಅಂಗಡಿಯ ಮೊಬೈಲ್ ಟವರ್ ಬಳಿ ಮೊಬೈಲ್ ಬಳಕೆದಾರರು ಜಮಾಯಿಸಿ ಧಿಕ್ಕಾರ ಕೂಗಿದರಲ್ಲದೇ ತೀವ್ರ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಿದರು.
ಈ ಕುರಿತು ತಾಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಕ ಬಾಡ, ವಸಂತ ನಾಯ್ಕ ಬಾಡ, ಇಲ್ಲಿನ ಟವರ್ ನಾಲ್ಕೆದು ತಿಂಗಳಿಂದ ನಿರ್ವಹಣೆ ಇಲ್ಲ. ಬಿಎಸ್ಎನ್ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಿಲ್ಲ. ಜಿಯೊದವರು ನಿರ್ವಹಣೆಗೆ ಸಿದ್ಧರಿಲ್ಲ, ಪೋರ್ಟ್ ಆಗಿ ಎನ್ನುತ್ತಾರೆ. ಹೀಗಾಗಿ ನಾವೆಲ್ಲರೂ ಸೇರಿದ್ದೇವೆ. ಶೀಘ್ರವೇ ಎಲ್ಲರೂ ಸೇರಿ ತಾಲೂಕಿನಾದ್ಯಂತ ಹೋರಾಟ ಮಾಡಿ, ಜಿಯೋ ಹಾಗೂ ಬಿಎಸ್ಎನ್ಎಲ್ ವಿರುದ್ಧ ಧಿಕ್ಕಾರ ಕೂಗುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಬಾಡ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ ಹೊಸಬಯ್ಯ ನಾಯ್ಕ, ವ್ಯಸೇಸ ಸದಸ್ಯ ಸಚಿನ ನಾಯ್ಕ, ಗಣೇಶ ನಾಯ್ಕ, ಭಾಸ್ಕರ ಪಟಗಾರ, ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣ್ಯ ನಾಯ್ಕ, ಪಂಚಾಯಿತಿ ಮಾಜಿ ಸದಸ್ಯ ಬಾಬು ನಾಯ್ಕ, ಉದ್ಯಮಿ ನಾಗರಾಜ ನಾಯ್ಕ, ವಿದ್ಯಾಧೀಶ ನಾಯ್ಕ, ಪ್ರವೀಣ ಭಟ್, ಸುರೇಶ ಶೇಟ್, ನಾರಾಯಣ ಭಟ್ಟ, ಎಸ್ಡಿಎಂಸಿ ಅಧ್ಯಕ್ಷ ಹರೀಶ ನಾಯ್ಕ, ಕಮಲಾಕ್ಷ ನಾಯ್ಕ, ಮಂಜುನಾಥ ಹರಿಕಂತ್ರ, ನಾಗರಾಜ ಮುಕ್ರಿ, ಉದ್ಯಮಿ ನಾರಾಯಣ ಪಟಗಾರ, ಮಹೇಶ ಹರಿಕಂತ್ರ, ಪ್ರಶಾಂತ ನಾಯ್ಕ, ಪ್ರಮೋದ, ಕೃಷ್ಣ ಭಟ್ಟ, ನಾಗರಾಜ ಮಡಿವಾಳ, ಭಾಸ್ಕರ ನಾಯ್ಕ ಇತರರು ಇದ್ದರು.