ಸಾರಾಂಶ
ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಬೆಳೆಗೆ ಪ್ರತಿಟನ್ಗೆ ₹4 ಸಾವಿರ ದರ ನಿಗದಿ ಪಡಿಸಬೇಕು, ಕೇಂದ್ರ ಸರ್ಕಾರ ಎಫ್ಆರ್ಪಿ ದರ ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಬೆಳೆಗೆ ಪ್ರತಿಟನ್ಗೆ ₹4 ಸಾವಿರ ದರ ನಿಗದಿ ಪಡಿಸಬೇಕು, ಕೇಂದ್ರ ಸರ್ಕಾರ ಎಫ್ಆರ್ಪಿ ದರ ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಬ್ಬು ಬೆಳೆಗಾರರ ಸಂಘ ಆಗ್ರಹಿಸಿದೆ. ಸಂಘದ ತಾಲೂಕು ಅಧ್ಯಕ್ಷ ಹಣಮಂತ ಮಗದುಮ್ ನಗರದ ರಮಾ ನಿವಾಸ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ದರ ಹೆಚ್ಚಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆಯಲು ರೈತರಿಗೆ ಸಾಕಷ್ಟು ಕರ್ಚು ಬರುತ್ತದೆ. ವಾರ್ಷಿಕ ಬೆಳೆಯಾಗಿರುವುದರಿಂದ ನಿರ್ವಹಣೆ ಸುಲಭವಲ್ಲ. 10 ವರ್ಷಗಳಿಂದ ಎಫ್ ಆರ್ ಪಿ ದರ ಹೆಚ್ಚಿಸಲಾಗಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಿದರು.ಬಾಕಿ ಬಿಡುಗಡೆ ಗೊಳಿಸಿ; 2021-22ನೇ ಸಾಲಿನ ₹62 ಹಾಗೂ ಕಳೆದ ವರ್ಷ ₹200 ಕಬ್ಬಿನ ಬಾಕಿ ಹಣ ಬಿಡುಗಡೆ ಗೊಳಿಸಬೇಕು. ಸರ್ಕಾರ ಈ ಕುರಿತು ಬಾಕಿ ಉಳಿಸಿ ಕೊಂಡಿರುವ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡುವ ಮೂಲಕ ಕೂಡಲೇ ಕಬ್ಬಿನ ಬಾಕಿ ಹಣ ಬಿಡುಗಡೆಗೊಳಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರ ನೀರಾವರಿಗೆ ₹40 ಲಕ್ಷ ಹಾಗೂ ಒಣ ಬೇಸಾಯಕ್ಕೆ 30 ಲಕ್ಷ ಪ್ರತಿ ಎಕರೆ ದರ ನಿಗದಿ ಪಡಿಸಿರುವದನ್ನು ಹೆಚ್ಚಿಸಿ 50 ಹಾಗೂ 40 ಲಕ್ಷಕ್ಕೆ ಏರಿಸಬೇಕು, ಕಲ್ಲಳ್ಳಿಯ ವೆಂಕಟೇಶ್ವರ ಏತನೀರಾವರಿ ಯೋಜನೆಯನ್ನು ಪೂರ್ಣ ಗೊಳಸಬೇಕು, ಜಮೀನು ಕಳೆದು ಕೊಂಡಿರುವ ರೈತರಿಗೆ ಸಂಪೂರ್ಣ ಪರಿಹಾರ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿದರು. ರೈತ ಬಸವರಾಜ ನ್ಯಾಮಗೌಡ ಮಾತನಾಡಿ ಸಿರಗುಪ್ಪಿ ರಸ್ತೆ ಹದಗೆಟ್ಟು ಹೋಗಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿಕಾರ್ಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಸುರೇಶ ಪಾಲಬಾಂವಿ, ಶಿವಲಿಂಗಪ್ಪ ತುಬಚಿ, ದರೆಪ್ಪ ಬೆಳಗಲಿ, ಮಕಬುಲ್ಸಾಬ್, ಶ್ರೀಶೈಲ ತಿಪ್ಪಣ್ಣವರ. ಶಮನ್ಸಾಬ ಮುಲ್ಲಾ ಮುಂತಾದವರಿದ್ದರು.