ಕನಕಗಿರಿ: ನೂತನ ಸಿಎಂ ಡಿ.ಕೆ. ಶಿವಕುಮಾರ ಅವರು ಶಾಸಕ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಿ ಜನಸೇವೆ ಮಾಡಲು ಅವಕಾಶ ನೀಡಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಜರತಹುಸೇನ್ ಮುಜಾವರ್ ಹೇಳಿದರು.

ಇಲ್ಲಿನ ಗ್ಯಾರಂಟಿ ಸಮಿತಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನಕಗಿರಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಶಿವರಾಜ ತಂಗಡಗಿ, ಮೂರು ಬಾರಿ ಸಚಿವರಾಗಿದ್ದಾರೆ. ಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆಯಾದ ಕನಕಗಿರಿ ಉತ್ಸವ, ಕೆರೆ ತುಂಬುವ ಯೋಜನೆ, ಕನಕಗಿರಿ-ಕಾರಟಗಿ ತಾಲೂಕು ಕೇಂದ್ರ, ಗ್ರಾಪಂನಿಂದ ಮೇಲ್ದರ್ಜೆಗೆ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆಯಿಂದ ಲೋಕಸಭೆ,ವಿಪ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸಿರುವ ಶಿವರಾಜ ತಂಗಡಗಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಿದಲ್ಲಿ ಪಕ್ಷ ಸಂಘಟನೆಯ ಜತೆಗೆ ಕ್ಷೇತ್ರ ಹಾಗೂ ರಾಜ್ಯವೂ ಅಭಿವೃದ್ಧಿ ಹೊಂದಲಿದೆ.ಅದಕ್ಕಾಗಿ ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಬೇಕು ಎಂದರು.

ಸದಸ್ಯರಾದ ಕನಕಪ್ಪ ತಳವಾರ, ಯಮನೂರಪ್ಪ, ಜಗದೀಶ ರಾಠೋಡ್, ನೀಲಕಂಠ ಬಡಿಗೇರ, ಚನ್ನಬಸವನಗೌಡ, ಕರಿಯಪ್ಪ ನಾಯಕ, ಜಗದೀಶ ಸುಳೇಕಲ್, ಹನುಮಮ್ಮ,ಗ್ಯಾನಪ್ಪ,ಭೀಮೇಶ, ವೀರೇಶ ಇತರರಿದ್ದರು.