ಉತ್ತರ ಕರ್ನಾಟಕದವರ ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ನಾಲೆಯಿಂದ ಕುಡಿಯುವ ನೀರಿನ ಯೋಜನೆ ಜಾರಿಯಾಗದೇ ಇರುವುದರಿಂದ ಇಲ್ಲಿನ ಜನರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ.

ನರಗುಂದ: ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಯೋಜನೆಯಾದ ಕಳಸಾ- ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ರೈತ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.

ಮಂಗಳವಾರ ರೈತ ಸಂಘಟನೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯಪಾಲರ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಉತ್ತರ ಕರ್ನಾಟಕದವರ ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ ನಾಲೆಯಿಂದ ಕುಡಿಯುವ ನೀರಿನ ಯೋಜನೆ ಜಾರಿಯಾಗದೇ ಇರುವುದರಿಂದ ಇಲ್ಲಿನ ಜನರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ ಎಂದರು.

ನ್ಯಾಯಾಧೀಕರಣವು 2018ರ ಆ.14ರಂದು ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆಯ 4 ಜಿಲ್ಲೆಯ 11 ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಮಹದಾಯಿ ಕಳಸಾ- ಬಂಡೂರಿ ಯೋಜನೆಯಡಿ ನೀರು ಬಳಕೆಗೆ ತೀರ್ಪು ನೀಡಿದೆ. ಅದರಲ್ಲಿ 3.09 ಟಿಎಂಸಿ ಕುಡಿಯುವುದಕ್ಕಾಗಿ ಆದೇಶ ಮಾಡಿ 8 ವರ್ಷ ಗತಿಸಿದರೂ ಇಲ್ಲಿಯವರೆಗೂ ಜಾರಿಯಾಗಿಲ್ಲ ಎಂದರು. ಈ ಯೋಜನೆ ಜಾರಿಯಾಗಲು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪ ದ್ಯಾಪಲೀಶಿ, ಸಿದ್ದಪ್ಪ ಹದ್ದಣ್ಣವರ, ವಿಶ್ವನಾಥ ಬಡಿಗೇರ, ಮೃತ್ಯುಂಜಯ ಕುಸಗಲ್, ಭರಮಪ್ಪ, ಸೇರಿದಂತೆ ಮುಂತಾದವರು ಇದ್ದರು.

ಇಂದು ವಿದ್ಯುತ್ ವ್ಯತ್ಯಯ

ನರಗುಂದ: ತಾಲೂಕಿನ ಕೊಣ್ಣೂರಿನ 110/11ಕೆವಿ ಮತ್ತು ಶಿರೋಳದ 33 ಕೆವಿ ಸ್ಟೇಷನ್ ವಿದ್ಯುತ್ ವಿತರಣಾ ಉಪಕೇಂದ್ರದಿಂದ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಜೂ. 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ವರಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ವಿದ್ಯುತ್ ವಿತರಣಾ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುವ 9 ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಶಿರೋಳ, ಕೊಣ್ಣೂರು, ಹಿರೇಕೊಪ್ಪ, ಚಿಕ್ಕನರಗುಂದ, ಹದಲಿ, ರಡ್ಡೇರನಾಗನೂರ, ಭೈರನಹಟ್ಟಿ, ವಾಸನ, ಬೆನಕನಕೊಪ್ಪ, ಗ್ರಾಪಂನ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಸಬೇಕೆಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.