ಬಳ್ಳಾರಿ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇ. 32 ರಷ್ಟು ಮಿಸಲಾತಿಯನ್ನು ನೀಡಲು ಸಂವಿಧಾನ 9ನೇ ಷೆಡ್ಯೂಲ್‌ಗೆ ಸೇರಿಸಬೇಕು ಹಾಗೂ ನಕಲಿ ಜಾತಿ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿನ ಪರಿಶಿಷ್ಟ ಜಾತಿ-ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಶೇ. 56 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಈ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಹಿತದೃಷ್ಟಿಯಿಂದ ಅನೇಕ ಹೋರಾಟಗಳ ಹಿನ್ನೆಲೆಯಲ್ಲಿ 2022 ರಲ್ಲಿ ರಾಜ್ಯ ಸರ್ಕಾರವು ಶೇ.50ರ ಬದಲು ಶೇ.56 ಮೀಸಲಾತಿ ಹೆಚ್ಚಳ ಮಾಡಿ ಕಾನೂನು ರೂಪಿಸಲಾಯಿತು.

ಶೇ.56ರಷ್ಟು ಮೀಸಲಾತಿಯ ಪೈಕಿ ಪರಿಶಿಷ್ಟ ಜಾತಿಗೆ ಶೇ.15ರಿಂದ 17, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7, ಹಿಂದುಳಿದ ವರ್ಗಕ್ಕೆ ಶೇ.32ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಯಿತು. ಈ ಕಾನೂನು ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಸಿದರೆ ಮಾತ್ರ ಊರ್ಜಿತವಾಗಲು ಸಾಧ್ಯವಿದೆ. ಈ ಕಾರಣದಿಂದ ರಾಜ್ಯ ಸರ್ಕಾರವು 2022-23 ರಲ್ಲಿ ಕೇಂದ್ರಕ್ಕೆ ಪತ್ರ ಬರೆದು ಈ ಕಾನೂನನ್ನು 9ನೇ ಷೆಡ್ಯೂಲ್ ಗೆ ಸೇರಿಸಲು ಕೋರಲಾಯಿತು. ಆದರೆ ಮೂರು ವರ್ಷಗಳಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಬಗ್ಗೆ, ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ವರ್ಗಗಳ ಹಿತ ಕಾಪಾಡುವ ದೃಷ್ಟಿಯಿಂದ ಮುಖ್ಯಮಂತ್ರಿ ತಕ್ಷಣ ಸರ್ವ ಪಕ್ಷಗಳ ನಿಯೋಗದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು ಕಾನೂನು ಬಾಹಿರವಾಗಿ ನಕಲಿ ಪ್ರಮಾಣ ಪತ್ರಗಳು ಪಡೆದು ನಿಜವಾದ ಪರಿಶಿಷ್ಟರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ನಕಲಿ ಪ್ರಮಾಣಪತ್ರಗಳನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು. ವಾಲ್ಮೀಕಿ ಸಮಾಜದ ಮುಖಂಡರಾದ ವಿ.ಎಸ್‌. ಶಿವಶಂಕರ್, ಸಂಗನಕಲ್ಲು ವಿಜಯಕುಮಾರ್, ಟಿ.ಲೋಕೇಶ್, ಜೋಳದ ರಾಶಿ ತಿಮ್ಮಪ್ಪ, ಬಸರಕೋಡು ಗೋವಿಂದ, ಕುಬೇರ ಮತ್ತಿತರರಿದ್ದರು.

22ಬಿಆರ್‌ವೈ4


ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಬಳ್ಳಾರಿಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.