15ಕ್ಕೆ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

| Published : Jul 13 2024, 01:46 AM IST / Updated: Jul 13 2024, 10:49 AM IST

ಸಾರಾಂಶ

Mysore, a massive protest by the Mysore East Zone Barangay Union on 15th

 ಮೈಸೂರು : ನಾಗರಿಕ ಸಮಾಜದಲ್ಲಿ ಗೌರವದ ಬದುಕು ಸಾಗಿಸಲು ಕನಿಷ್ಠ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಜು. 15 ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 9.30ಕ್ಕೆ ವರ್ತುಲ ರಸ್ತೆಗೆ ತಾಕಿಕೊಂಡ ಮಾನಸಿನಗರ ಹಾಗೂ ಕೆ.ಎಸ್.ಎಫ್.ಸಿ ಬಡಾವಣೆಯ ವಿನಾಯಕ ಉದ್ಯಾನವನದಿಂದ ಪಾದಯಾತ್ರೆ ಅರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ, ನಂತರ ಸಮಾವೇಶಗೊಂಡು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಒಕ್ಕೂಟದ ಅಧ್ಯಕ್ಷ ಎ.ಎಂ. ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಂಸ್ಕೃತಿಕ ನಗರಿ ಹಾಗೂ ನಿವೃತ್ತರ ಸ್ವರ್ಗ ಎಂಬ ಖ್ಯಾತಿವೆತ್ತ ಮೈಸೂರು ನಗರ ಇಂದು ನಾನಾ ಕಾರಣಗಳಿಗಾಗಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನಮಾನ ಗಳಿಸಿದೆ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ನಂತರದ ಸ್ಥಾನದಲ್ಲಿರುವ ಮೈಸೂರು ನಗರ ಇಂದು ಬೆಳೆಯುತ್ತಿರುವ ಎರಡನೇ ಹಂತದ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವುದು ಜಗಜ್ಜಾಹೀರಾಗಿದೆ. 

ಇಂತಹ ಸಂದರ್ಭದಲ್ಲಿ ಮೈಸೂರು ನಗರವನ್ನು ಭವಿಷ್ಯದ ದಿನಗಳಲ್ಲಿ ಕಾಡಲಿರುವ ಸಮಸ್ಯೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ರಚನಾತ್ಮಕ ಕಾರ್ಯಕ್ರಮ ರೂಪಿಸಿದೆ ಎಂದರು.ಅದರ ಭಾಗವಾಗಿ ಮಾಲಿನ್ಯ ರಹಿತ ಗಾಳಿ, ಕಸಮುಕ್ತ ಬದುಕು, ಸ್ವಚ್ಛ ಹಾಗೂ ಸುಂದರ ಪರಿಸರ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಗುರಿಯಾಗಿರಿಸಿಕೊಂಡು ಒಂದಷ್ಟು ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರದ ಗಮನ ಸೆಳೆಯುವ ಕಾರ್ಯಕ್ರಮ ರೂಪಿಸಿದೆ ಎಂದು ಅವರು ಹೇಳಿದರು.ಯೋಜನೆಗಳ ಮೊದಲ ಭಾಗವಾಗಿ ಹಾಗೂ ಮೊದಲ ಹೋರಾಟದ ಭಾಗವಾಗಿ ಜು. 15ರಂದು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಹೋರಾಟವೊಂದನ್ನು ರೂಪಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯ ಪ್ರತಿ ಬಡಾವಣೆಯಿಂದ 20 ಮಂದಿ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಲಿದ್ದು, ಅಂದಾಜು ೫೦೦ಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾವೇರಿ ಹಾಗೂ ಕಪಿಲಾ ನದಿ ಮೈಸೂರಿಗೆ ಮಗ್ಗುಲಲ್ಲೇ ಇದ್ದರೂ ಮೈಸೂರು ನಗರದ ಹಲವು ಬಡಾವಣೆಗಳು ಇಂದು ಕಾವೇರಿ ನೀರಿನಿಂದ ವಂಚಿತವಾಗಿವೆ. ಚಾಮುಂಡಿ ಬೆಟ್ಟ ಮೈಸೂರಿನ ಹೃದಯ ಭಾಗದಲ್ಲಿದ್ದರೂ ಪ್ರಕೃತಿಗಾಗಿ ಪರಿತಪಿಸುವಂತಾಗಿದೆ. ಮೈಸೂರು ಸುತ್ತಮುತ್ತ ಕಬಿನಿ, ಕೆಆರ್ಎಸ್, ಹಾರಂಗಿ ಅಣೆಕಟ್ಟೆ ಇದ್ದರೂ ಬೋರ್ ವೆಲ್ ನೀರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿ ನಮ್ಮ ನಾಗರೀಕ ಸಮಾಜ ಇದೆ. ಈ ರೀತಿಯ ಹತ್ತು ಹಲವು ಅಂಶಗಳು ಇಂದು ನಾಗರಿಕ ಸಮಾಜದ ಮೇಲೆ ಸವಾರಿ ಮಾಡುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಹೋರಾಟ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದೆಲ್ಲವನ್ನೂ ಮನಗಂಡೇ ಮೈಸೂರು ನಗರದ ಪೂರ್ವಭಾಗದಲ್ಲಿರುವ ಹೊರವರ್ತುಲ ರಸ್ತೆ ನಂತರದ ಸುಮಾರು ೩೦ ಬಡಾವಣೆಗಳಲ್ಲಿರುವ ಸಂಘಟನೆಗಳು ಒಗ್ಗೂಡಿ ಇಂದು "ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ " ರಚನೆಯಾಗಿದೆ ಎಂದ ಅವರು, ನಾಗರಿಕ ಸಮಾಜಕ್ಕೆ ಮೂಲಸೌಕರ್ಯವೇ ಆಭರಣ. ಅದನ್ನು ಅನುಷ್ಠಾನಗೊಳಿಸುವಲ್ಲಿ ಬಡಾವಣೆಯ ನಿರ್ಮಾಣಕಾರರು ಹಾಗೂ ಆಳುವ ಸರ್ಕಾರಗಳು ತೋರಿದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಇಂದು ನಾಗರಿಕರು ಪರಿತಪಿಸುವಂತಾಗಿದೆ. ಅವರೆಲ್ಲರ ಪ್ರಾತಿನಿಧಿಕವಾಗಿ ಒಕ್ಕೂಟ ಇಂದು ಬೃಹತ್ ಪ್ರಮಾಣದ ಹೋರಾಟಕ್ಕೆ ಕರೆ ನೀಡಿದೆ ಎಂದರು.ಸುದ್ದಿಗೋಷಠಿಯಲ್ಲಿ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್.ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್.ಅರುಣ್ , ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ಎಚ್. ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಭಟ್ ಇದ್ದರು.