ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರದ ಮಟ್ಟದಲ್ಲಿ ಧೂಳು ಹಿಡಿಯುತ್ತಿರುವ ಕೋಲಾರ ಎ.ಪಿ.ಎಂ.ಸಿ. ಜಾಗದ ಕಡತಕ್ಕೆ ಮುಕ್ತಿ ನೀಡುವಲ್ಲಿ ವಿಫಲವಾಗಿರುವ ಕಂದಾಯ ಹಾಗೂ ಉಸ್ತುವಾರಿ ಸಚಿವರ ರೈತ ವಿರೋಧಿ ಧೋರಣೆ ಖಂಡಿಸಿ ಮೇ 2೬ರ ಮಂಗಳವಾರ ಜಾನುವಾರುಗಳು, ಟ್ರ್ಯಾಕ್ಟರ್‌ಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಕೊಂಡರಾಜನಹಳ್ಳಿ ಗೇಟ್ ಬಂದ್ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಎರಡು ದಶಕಗಳಿಂದ ಏಷ್ಯಾದಲ್ಲಿ ೨ನೇ ಅತಿದೊಡ್ಡ ಮಾರುಕಟ್ಟೆ ಪ್ರಸಿದ್ಧಿ ಪಡೆದಿರುವ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಮಾರುಕಟ್ಟೆಯ ಜಾಗದ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಭೂಮಿ ಮಂಜೂರು ಮಾಡಿ ಅಭಿವೃದ್ಧಿ ಮಾಡಲು ಉಸ್ತುವಾರಿ ಹಾಗೂ ಕಂದಾಯ ಸಚಿವರಿಗೆ ಇಚ್ಛಾಶಕ್ತಿ ಕೊರತೆ ಇರುವ ಜೊತೆಗೆ ಖಾಸಗಿ ಮಾರುಕಟ್ಟೆ ಮಾಡಿ ರೈತರಿಂದ ಹಗಲು ದರೋಡೆ ಮಾಡಲು ಮುಂದಾಲೋಚನೆ ಮಾಡಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೆಲವೇ ದಿನಗಳಲ್ಲಿ ಟೊಮೆಟೋ ಸುಗ್ಗಿ ಕಾಲ ಪ್ರಾರಂಭವಾಗುತ್ತಿದ್ದು, ಮಾರುಕಟ್ಟೆ ಜಾಗದ ಸಮಸ್ಯೆಯಿಂದ ಟ್ರಾಫಿಕ್ ಸಮಸ್ಯೆ, ಜೊತೆಗೆ ವ್ಯಾಪಾರಸ್ಥರು, ಮಂಡಿ ಮಾಲೀಕರು, ರೈತರಿಗೆ ಅನನುಕೂಲವಾಗುತ್ತಿದ್ದು, ಜನಪ್ರತಿನಿಧಿಗಳು ರೈತರ ಜೀವನಾಡಿಯಾಗಿರುವ ಮಾರುಕಟ್ಟೆಯ ಅಭಿವೃದ್ಧಿ ಕಡೆ ಏಕೆ ಗಮನ ಹರಿಸುತ್ತಿಲ್ಲವೆಂದು ಪ್ರಶ್ನೆ ಮಾಡಿದರು.ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಶಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಪುತ್ತೇರಿರಾಜು, ಚಂದ್ರಪ್ಪ, ರಾಜ್ಯ ಮು. ಕಮ್ಮದಟ್ಟಿ ಚಲಪತಿ, ಮಂಜುನಾಥ, ದೇವರಾಜ್, ಯಲ್ಲಣ್ಣ, ಸುಪ್ರಿಂ ಚಲ, ಆನಂದರೆಡ್ಡಿ, ಮುನಿರಾಜು, ಶೈಲಜ, ರತ್ನಮ್ಮ, ಗೌರಮ್ಮ, ನಯನ, ಪವಿತ್ರ ಇದ್ದರು.