ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಆರ್ಎಸ್ ಜಲಾಶಯದಿಂದ ತಾಲೂಕಿನ ಕೊನೇ ಭಾಗದ ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ಆಗ್ರಹಿಸಿ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತಾಲೂಕಿನ ಟಿ.ಕಾಗೇಪುರ ಬಳಿಯ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರಾಜ್ಯ ರೈತ ಸಂಘ, ಸಿಪಿಐ(ಎಂ) ಒಳಗೊಂಡಂತೆ ತಳಗವಾದಿ, ದೇವಿಪುರ, ಟಿ.ಕಾಗೇಪುರ, ನೆಲಮಾಕನಹಳ್ಳಿ, ಮಾದಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಆಗಮಿಸಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಕೊನೇ ಭಾಗದ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿದರು.
ಸಮರ್ಪಕ ಮಳೆ ಹಿನ್ನೆಲೆಯಲ್ಲಿ ತಾಲೂಕಿನ ಸಾವಿರಾರು ಎಕರೆ ಪ್ರದೇಶಗಳಲ್ಲಿ ಇರುವ ಕಬ್ಬು ಸೇರಿದಂತೆ ಅನೇಕ ಬೆಳೆಗಳು ಒಣಗಿ ನಿಂತಿವೆ. ಅವುಗಳ ರಕ್ಷಣೆಗೆ ನಾಲೆಗಳಿಗೆ ಕೂಡಲೇ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಿಂದೆ ಪ್ರತಿಭಟನೆ ನಡೆಸಿದ್ದವು. ಅದರ ಪರಿಣಾಮವಾಗಿ ಕೆಆರ್ಎಸ್ ಜಲಾಶಯದಿಂದ ನೀರು ಬಿಡುಗಡೆಯಾಗಿದೆ. ಆದರೆ, ಮಳವಳ್ಳಿ ಹಾಗೂ ಕೆ.ಎಂ.ದೊಡ್ಡಿ ಭಾಗದ ನಾಲೆಗಳಿಗೆ ಇನ್ನೂ ನೀರು ಬಂದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ನೀರು ಎನ್ನುವುದು ಸರಿಯಲ್ಲ. ತೆಂಗು ಸೇರಿದಂತೆ ಅನೇಕ ಬೆಳೆಗಳು ಒಣಗುತ್ತಿವೆ. ಅವುಗಳ ರಕ್ಷಣೆಗೆ ಹೆಚ್ಚುವರಿ ಒಂದು ದಿನದ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಭರತೇಶ್ ಕುಮಾರ್, ಈಗಾಗಲೇ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೆಬ್ಬಕವಾಡಿ ನಾಲಾ ಮೂಲಕ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಒಂದು ದಿನದೊಳಗೆ ನಮ್ಮ ಭಾಗಕ್ಕೆ ನೀರು ಬರಲಿದೆ. ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಮಲಿಂಗೇಗೌಡ, ದೇವಿಪುರ ಬಸವರಾಜು, ಶಿವನಂಜು, ಮಹೇಶ್, ಟಿ.ಎಲ್.ಕೃಷ್ಣೇಗೌಡ, ಟಿ.ಎಚ್.ಆನಂದ್, ಹನುಮಂತು, ಪ್ರಸನ್ನ, ಕುಮಾರ್, ರಮೇಶ್, ಚೌಡಯ್ಯ, ಪುನೀತ್, ಚೌಡೇಗೌಡ, ನಾಗಣ್ಣ, ಸಣ್ಣೇಗೌಡ ಪಾಲ್ಗೊಂಡಿದ್ದರು.