ಹರಪನಹಳ್ಳಿ: ತಾಲೂಕಿನ ಬೆಂಡಿಗೇರಿ ಸಣ್ಣ ತಾಂಡಾದ ಸಮೀಪ ಅಳವಡಿಸಿರುವ ಪವನ ವಿದ್ಯುತ್ ಕಂಬವನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಗಿರೀಶಬಾಬು ಅವರಿಗೆ ಮನವಿ ಸಲ್ಲಿಸಿದರು.
ಹರಪನಹಳ್ಳಿ- ದಾವಣಗೆರೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬೆಂಡಿಗೇರಿ ಸಣ್ಣ ತಾಂಡಾದ ಸಮೀಪ ಸರ್ವೆ ನಂ.157/ಬಿ ಜಮೀನಿನಲ್ಲಿ ಗುಜರಾತ್ನ ಸುಜ್ಲಾನ್ ಕಂಪನಿಯವರು ಪವನ ವಿದ್ಯುತ್ ಕಂಬ ಅಳವಡಿಸುವುದರಿಂದ ಸಾರ್ವಜನಿಕರ ಜೀವಕ್ಕೆ ತೊಂದರೆಯಾಗುತ್ತಿದೆ. ಈ ಸ್ಥಳದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಬಸ್ ತಂಗುದಾಣ ಇದೆ. ಕಂಪನಿಯವರು ನಿಯಮಗಳನ್ನು ಉಲ್ಲಂಘಿಸಿ ಯಂತ್ರಗಳನ್ನು ಅಳವಡಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ತಾಂಡದ ಜನರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.157/ಬಿ ಸರ್ವೆ ನಂಬರ್ ಸುತ್ತಮುತ್ತ ಮನೆಗಳು ಹಾಗೂ ಇನ್ನಿತರ ಕೃಷಿ ಜಮೀನುಗಳಿದ್ದು ಈ ಸ್ಥಳದಲ್ಲಿ ಬಡವರು ಕೂಲಿ ಕಾರ್ಮಿಕರು ಸಾರ್ವಜನಿಕರು ವಾಸಿಸುತ್ತಿದ್ದಾರೆ. ಈ ಫ್ಯಾನಿನ ಗಾಳಿ ರಭಸಕ್ಕೆ ವೃದ್ಧರು, ಶಾಲಾ ಮಕ್ಕಳು, ಮಹಿಳೆಯರಿಗೆ ಮಾನಸಿಕ ಹಾಗೂ ಶಬ್ದ ಮಾಲಿನ್ಯ, ವಾಯುಮಾಲಿನ್ಯ, ವಿದ್ಯುತ್ ತರಂಗಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಜ್ಲಾನ್ ಕಂಪನಿಯ ಕಂಬವನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಾಹಂತೇಶ್ ನಾಯ್ಕ, ರವಿನಾಯ್ಕ, ಪರ್ಯಾನಾಯ್ಕ, ಸಂಕ್ರನಾಯ್ಕ, ಕೃಷ್ಣನಾಯ್ಕ, ಕೋಟ್ರೇಶ್ ನಾಯ್ಕ, ವಾಗೇಶ್ ನಾಯ್ಕ, ರಮೇಶ್ ನಾಯ್ಕ ಸೇರಿದಂತೆ ಇತರರು ಇದ್ದರು.ಪವನ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬೆಂಡಿಗೇರಿ ಸಣ್ಣ ತಾಂಡಾದ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.