ದಾಬಸ್ಪೇಟೆ: ಕೆಐಎಡಿಬಿ ವತಿಯಿಂದ ಸೋಂಪುರ ಹೋಬಳಿಯಲ್ಲಿ ಸಾವಿರಾರು ಎಕರೆ ರೈತರ ಭೂಮಿಯನ್ನು ಗ್ರಾಮಗಳ ಪಕ್ಕದವರೆಗೂ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು ಭವಿಷ್ಯದಲ್ಲಿ ನಮಗೆ ಶವ ಹೂಳಲು ಜಾಗವಿರುವುದಿಲ್ಲ, ಹಾಗಾಗಿ ಪ್ರತಿ ಗ್ರಾಮಕ್ಕೆ ಕಡ್ಡಾಯವಾಗಿ ಎರಡು ಎಕರೆ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಸ್ಮಶಾನಕ್ಕೆ ಕೆಐಎಡಿಬಿ ಮೀಸಲಿರಿಸಬೇಕೆಂದು ಮಾಚನಹಳ್ಳಿ ಗ್ರಾಮದ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ಟಾಭಿರಾಮಯ್ಯ ಆಗ್ರಹಿಸಿದರು
ದಾಬಸ್ಪೇಟೆ: ಕೆಐಎಡಿಬಿ ವತಿಯಿಂದ ಸೋಂಪುರ ಹೋಬಳಿಯಲ್ಲಿ ಸಾವಿರಾರು ಎಕರೆ ರೈತರ ಭೂಮಿಯನ್ನು ಗ್ರಾಮಗಳ ಪಕ್ಕದವರೆಗೂ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು ಭವಿಷ್ಯದಲ್ಲಿ ನಮಗೆ ಶವ ಹೂಳಲು ಜಾಗವಿರುವುದಿಲ್ಲ, ಹಾಗಾಗಿ ಪ್ರತಿ ಗ್ರಾಮಕ್ಕೆ ಕಡ್ಡಾಯವಾಗಿ ಎರಡು ಎಕರೆ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಸ್ಮಶಾನಕ್ಕೆ ಕೆಐಎಡಿಬಿ ಮೀಸಲಿರಿಸಬೇಕೆಂದು ಮಾಚನಹಳ್ಳಿ ಗ್ರಾಮದ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ಟಾಭಿರಾಮಯ್ಯ ಆಗ್ರಹಿಸಿದರು.
ಸೋಂಪುರ ಹೋಬಳಿಯ ಮಾಚನಹಳ್ಳಿ, ಗೆದ್ದಲಹಳ್ಳಿ, ಗೊಟ್ಟಿಗೆರೆ ಗ್ರಾಮಗಳ ಒಟ್ಟು 520.75 ಎಕರೆ ಜಾಗವನ್ನು ಸೋಂಪುರ ಕೈಗಾರಿಕಾ ಪ್ರದೇಶದ 7 ಹಂತದ ಕೈಗಾರಿಕೆ ಅಭಿವೃದ್ಧಿಗಾಗಿ ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಸಾರ್ವಜನಿಕ ಪರಿಸರ ಆಲಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಐಎಡಿಬಿಯೂ ಫಲವತ್ತಾದ ಕೃಷಿಭೂಮಿಯನ್ನು ಭೂಸ್ವಾಧೀನಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಗ್ರಾಮಗಳಿಂದ ನೂರು ಮೀಟರ್ ಅಂತರವನ್ನೂ ಕಾಯ್ದುಕೊಳ್ಳದೆ ಸ್ವಾದೀನಪಡಿಸಿಕೊಂಡಿದ್ದು, ಮುಂದಿನ ಪೀಳಿಗೆಯವರಿಗೆ ಶವ ಹೂಳಲು ಜಾಗ ಸಿಗುವುದಿಲ್ಲ. ಮಾಚನಹಳ್ಳಿ, ಗೊಟ್ಟಿಗೆರೆ, ಅವ್ವೇರಹಳ್ಳಿ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಮೀಸಲಿರಿಸಬೇಕು ಎಂದು ಹೇಳಿದರು.ನಕಾಶೆ ರಸ್ತೆ ಮುಚ್ಚಬೇಡಿ:ಗ್ರಾಪಂ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಗ್ರಾಮಗಳಿಗೆ ನೂರಾರು ವರ್ಷಗಳಿಂದ ಇದ್ದ ನಕಾಶೆ ರಸ್ತೆಗಳನ್ನು ಕೆಐಎಡಿಬಿ ಮುಚ್ಚುತ್ತಿದ್ದು ಇದರಿಂದ ಅಕ್ಕಪಕ್ಕದ ಗ್ರಾಮಸ್ಥರು ಪಡಿತರ ಪಡೆಯಲು 5-6 ಕಿ.ಮೀ. ಕ್ರಮಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅವ್ವೇರಹಳ್ಳಿಯಿಂದ ಮಾಚನಹಳ್ಳಿಗೆ ಇದ್ದ ಹಳೆಯ ನಕಾಶೆ ರಸ್ತೆಯನ್ನು ಹಾಗೆಯೇ ಬಿಡಬೇಕು, ಹಾಗೆಯೇ ಎಗ್ಗಿಲ್ಲದೆ ಕೊಳವೆಬಾವಿಗಳನ್ನು ಕೈಗಾರಿಕೆಯವರು ಕೊರೆಯುತ್ತಿದ್ದು ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಮನವಿ:ರಾತ್ರಿ ವೇಳೆ ಹಲವು ಕೈಗಾರಿಕೆಗಳು ವಿಷಾನಿಲವನ್ನು ಹೊರಬಿಡುತ್ತಿವೆ. ಇದರಿಂದ ಅಪಾಯಕಾರಿ ರಾಸಾಯನಿಕ ಗಾಳಿಯಲ್ಲಿ ಮಿಲನಗೊಂಡು ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಪರಿಸರ ನಾಶವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು, ಕೈಗಾರಿಕೆಗಳಿಗೆ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಿದರೆ ಅಂತರ್ಜಲ ಖಾಲಿಯಾಗುವ ಜೊತೆಗೆ ಕಲುಷಿತವಾಗುವ ಅಪಾಯವಿದೆ. ಕೂಡಲೇ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಈ ಭಾಗಲದಲ್ಇ ನವಿಲುಗಳ ಸಂಖ್ಯೆ ಹೆಚ್ಚಿದ್ದು ಅವುಗಳ ರಕ್ಷಣೆಗೆ ನವಿಲುಧಾಮಕ್ಕೆ ಜಾಗ ಮಂಜೂರು ಮಾಡಬೇಕು, ಬೆಂಕಿ ಅವಗಡ ತಡೆಯಲು ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡಬೇಕು, ಗ್ರಾಮಗಳ ಸುತ್ತ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಣೆ ಮಾಡಬೇಕು, ನಿಡವಂದ, ಹೊನ್ನೇನಹಳ್ಳಿ ಗ್ರಾಮಗಳ ಬಳಿ ಕೆಐಎಡಿಬಿಯವರು ಉದ್ಯಾನವನಗಳಿಗೆ ಮೀಸಲಿರಿಸಿದ್ದ ಜಾಗಗಳನ್ನು ಕೈಗಾರಿಕೆಗಳಿಗೆ ಮಂಜೂರು ಮಾಡಿದ್ದು ಎಷ್ಟು ಸರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕರು ಕೆಐಎಡಿಬಿ ಹಾಗೂ ಮಾಲಿನ್ಯನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಕೇಳಿದರು.ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಎಂ.ಅನಿಲ್ ಕುಮಾರ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ್ರು, ಅಭಿವೃದ್ದಿ ಅಧಿಕಾರಿ ಲೀಲಾವತಿ, ಎಇಇ ಮಹಿಧರ್, ಎಇ ಅಮಿತ್, ಉಪ ತಹಸೀಲ್ದಾರ್ ಶಶಿಧರ್, ರಾಜಸ್ವ ನಿರೀಕ್ಷಕ ಮುನಿರಾಜು, ವಿ.ಎ. ಬಾಲಕೃಷ್ಣ , ರೈತ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೋಟ್...............ರೈತರು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಮಂಜೂರಾತಿಗೆ ಸಂಬಂಧಪಟ್ಟ ಅಧಿಕಾರಿಗಳಿ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಕೈಗಾರಿಕೆಗಳು ಕೊಳವೆಬಾವಿ ಕೊರೆಯಲು ಅನುಮತಿ ನೀಡುವುದಿಲ್ಲ. ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಷಾನಿಲ ಹೊರ ಬಿಡುವ ಕಾರ್ಖಾನೆಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು.
-ಬಸವರಾಜು, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಪೋಟೋ 3 :
ಸೋಂಪುರ ಹೋಬಳಿಯ ಮಾಚನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ಸಾರ್ವಜನಿಕ ಪರಿಸರ ಆಲಿಕೆ ಸಭೆಯಲ್ಲಿ ಜಿಲ್ಲಾಧಿಕಾರಿ ಬಸವರಾಜು ಮಾತನಾಡಿದರು. ಪರಿಸರ ಅಧಿಕಾರಿ ಎಂ.ಅನಿಲ್ ಕುಮಾರ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ್ರು ಇತರರು ಹಾಜರಿದ್ದರು.