ಚಾಲಕರ ವಿರುದ್ಧದ ಕಾನೂನು ಹಿಂಪಡೆಯಲು ಆಗ್ರಹ

| Published : Jan 18 2024, 02:06 AM IST

ಸಾರಾಂಶ

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಲೇ ಅತೀ ಹೆಚ್ಚು ಅಫಘಾತ ಆಗುತ್ತಿದ್ದು, ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಉಪ ಜೀವನಕ್ಕಾಗಿ ಡ್ರೈವಿಂಗ್ ಮಾಡುತ್ತಿರುವ ಬಡ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಕೇಂದ್ರ ಸರ್ಕಾರ ಮಾಡಬಾರದು.

ಕನ್ನಡಪ್ರಭ ವಾರ್ತೆ ಆಳಂದ

ಲಾರಿ ಸೇರಿದಂತೆ ಇನ್ನಿತರ ವಾಹನ ಚಾಲಕರಿಗೆ ಕೇಂದ್ರ ಸರ್ಕಾರ ವಿಧಿಸಿದ ಮರಣ ಶಾಸನವನ್ನು ಕೂಡಲೇ ಹಿಂಪಡೆಯಬೇಕೆಂದು ಹೋರಾಟಗಾರ ರಮೇಶ ಲೋಹಾರ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಬಸ್ ನಿಲ್ದಾಣ ಮುಂದೆ ಬುಧವಾರ ಡ್ರೈವರ್ ಸಂಘದ ಮುಖಂಡ ಫಯಾಜ್ ಪಟೇಲ ನೇತೃತ್ವದಲ್ಲಿ ಚಾಲಕರು ಬೇಡಿಕೆಗೆ ಒತ್ತಾಯಿಸಿ ಹಮ್ಮಿಕೊಂಡ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದರು.

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಲೇ ಅತೀ ಹೆಚ್ಚು ಅಫಘಾತ ಆಗುತ್ತಿದ್ದು, ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಉಪ ಜೀವನಕ್ಕಾಗಿ ಡ್ರೈವಿಂಗ್ ಮಾಡುತ್ತಿರುವ ಬಡ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಕೇಂದ್ರ ಸರ್ಕಾರ ಮಾಡಬಾರದು. ಕೂಡಲೇ ಈ ಕಾನೂನು ರದ್ದುಗೊಳಿಸಬೇಕು. ಇಲ್ಲವಾದರೆ, ಈ ಹಿಂದೆ ದೆಹಲಿ ಗಡಿ ಪ್ರದೇಶದಲ್ಲಿ ರೈತರು ರಸ್ತೆ ಮೇಲೆ ವರ್ಷಗಟ್ಟಲೇ ಹೋರಾಟ ಮಾಡಿದ ರೀತಿ ಈ ಕರಾಳ ಕಾನೂನು ಹಿಂಪಡೆಯುವವರೆಗೆ ರಸ್ತೆ ಚಳುವಳಿ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಿಪಿಐ ಮತ್ತು ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಪ್ರತಿಭಟನೆ ಬೆಂಬಲಿಸಿ ಮಾತನಾಡಿ, ಚಾಲಕರಿಗೆ ಹೇರಿದ ಕಾನೂನು ಕಾರ್ಪೊರೇಟ್‍ಗಳ ಪರವಾಗಿದೆ ಎಂದು ಟೀಕಿಸಿದರು.

ಚಾಲಕರ ಸಂಘದ ಮುಖಂಡ ಫಯಾಜ್ ಪಟೇಲ, ಸಿಪಿಐಎಂ ಪಕ್ಷದ ಪಾಂಡುರಂಗ ಮಾವಿನಕರ್, ಲತಿಪ ಮುರುಮಕರ್, ದಲಿತ ಸೇನೆ ಮುಖಂಡ ಮಲ್ಲಿಕಾರ್ಜುನ ಬೋಳಣಿ, ಧರ್ಮಾ ಬಂಗರಗಿ ಮಾತನಾಡಿ ಚಾಲಕರ ಮೇಲಿನ ಕಾನೂನು ವಾಪಸ್ಸಿಗೆ ಆಗ್ರಹಿಸಿದರು.

ವಾಹನ ಚಾಲಕರಿಗೆ ದೇಶದಲ್ಲಿ ಇರತಕ್ಕಂತ ವಾಹನ ಚಾಲಕರಿಗೆ ಈ ಕಾನೂನನ್ನು 7 ಲಕ್ಷ ದಂಡ ಹಾಗೂ 10 ವರ್ಷ ಜೈಲನ್ನು ವಿಧಿಸುತ್ತಿರುವುದು ಅಸಮಂಜಸವಾಗಿದೆ. ಅಲ್ಲದೆ ಈ ಕಾನೂನಿನ ಮೂಲಕ ದೇಶದ ಸಾರ್ವಜನಿಕರು ಹಾಅಗೂ ಖಾಸಗಿ ವಾಹನ ಚಾಲಕ ವ್ಯವಸ್ಥೆ ಪೂರ್ತಿ ಕಾರ್ಪೊರೇಟ್‌ ಸೆಕ್ಟರ್‌ಗೆ ಕೊಡುತ್ತಿರುವ ಬಿಜೆಪಿ ಸರ್ಕಾರ ಹುನ್ನಾರ ವಿರೋಧಿಸಿ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಜಯಸಿಂಗ್ ವಾಲ್ಮೀಕಿ, ಮನ್ಸೂರ್ ಅಗಾಡೆ, ಅಲೀಂ, ಖಜೂರಿ, ಸಲೀಂ, ಬಸು ಮೊಡರಕರ್, ಮಲ್ಲೇಶ ಬನಸೋಡೆ, ಅಬ್ದಿ ಅನ್ಸಾರಿ ಸೇರಿದಂತೆ ಲಾರಿ,ಆಟೋ ಚಾಲಕರು ಭಾಗವಹಿಸಿದ್ದರು.