ಜನರಿಂದ, ಜನರಿಗೋಸ್ಕರ ಪ್ರಜಾಪ್ರಭುತ್ವ: ವಿ.ಜಿ.ಲೋಕೇಶ್‌

| Published : Jan 27 2024, 01:16 AM IST

ಸಾರಾಂಶ

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಂಟಿಕೊಪ್ಪ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಗಣರಾಜ್ಯೋತ್ಸ ಆಚರಣೆಯ ಬಗ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಮ್ಮ ದೇಶ ರಾಜರ ಆಳ್ವಿಕೆ ಮತ್ತು ವಿದೇಶಿಯ ಅಳ್ವಿಕೆಗೆ ಒಳಪಟ್ಟಿದಾಗ ಅಲ್ಲಿ ಸರ್ವಾಧಿಕಾರ ಮನೆ ಮಾಡಿತು. ಸ್ವಾತಂತ್ರ್ಯಾ ನಂತರ ಜನರಿಂದ ಜನರಿಗಾಗಿ ಮತ್ತು ಜನರಿಗೋಸ್ಕರ ಪ್ರಜಾಪ್ರಭುತ್ವ ವ್ಯವಸ್ಥೆ ಕಂಡುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಂಟಿಕೊಪ್ಪ ಜಿ.ಎಂ.ಪಿ.ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡಿದರು.

1947 ರಲ್ಲಿ ಸಂವಿಧಾನ ರಚನಾ ಕರಡು ಸಮಿತಿ ರಚಿಸಲಾಯಿತು. ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ 2 ವರ್ಷ 11 ತಿಂಗಳು 18 ದಿನ ವಿವಿಧ ರಾಷ್ಟçಗಳ ಸಂವಿಧಾನಗಳನ್ನು ಪರಮರ್ಶಿಸಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಿಕೆಯಾಗುವ ನಿಟ್ಟಿನಲ್ಲಿ ಲಿಖಿತ ಸಂವಿಧಾನ ರಚಿಸಲಾಯಿತು. ಈ ಸಂವಿಧಾನವು ಕೈ ಬರಹದ ರೂಪದಲ್ಲಿದ್ದು, ಪಾರ್ಲಿಮೆಂಟ್‌ ಗ್ರಂಥಾಲಯದಲ್ಲಿ ಶಾಶ್ವತವಾಗಿ ಸಂರಕ್ಷಿಸಿಡಲಾಗಿದೆ 1950 ಜ.26 ರಂದು ಸಂವಿಧಾನ ಜಾರಿಗೆ ಬಂದಿದ್ದು, ಅದರ ಸದ್ಬಳಕೆ ಮೂಲಕ ಈ ದಿನವನ್ನು ಒಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯಿಂದ ರಾಷ್ಟ್ರಧ್ವಜಕ್ಕೆ ಗೌರವ ರಕ್ಷೆ ಅರ್ಪಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಧ್ವಜಾರೋಹಣ ನೇರವೇರಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.

ಪುಟಾಣಿ ವಿದ್ಯಾರ್ಥಿಗಳ ಭಾರತಾಂಬೆಗೆ ನಮನ ಸಲ್ಲಿಸುವ ಅಂಗಸಾಧನೆಯ ನೃತ್ಯ ಜನಮನ ರಂಜಿಸಿತು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ದಿನದ ಮಹತ್ವದ ಕುರಿತು ಮಾತನಾಡಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಶಿವಮ್ಮ ಮಹೇಶ್, ಸದಸ್ಯರಾದ ಪಿ.ಎಫ್.ಸಬಾಸ್ಟೀನ್, ಬಿ.ಎಂ.ಸುರೇಶ್, ಸೋಮನಾಥ್, ಆಲಿಕುಟ್ಟಿ, ಶಬ್ಬೀರ್, ರಫೀಕ್‌ ಖಾನ್, ಮಂಜುಳ, ಹಸೀನಾ, ವಸಂತಿ, ಶಾಂತಿ, ನಾಗರತ್ನ, ರೇಷ್ಮ, ಛೇಂಬರ್ ಆಫ್‌ ಕಾರ್ಮಸ್ ಅಧ್ಯಕ್ಷ ಡಿ.ನರಸಿಂಹ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಮಾಜಿ ಉಪಾಧ್ಯಕ್ಷರಾದ ನಳಿನಿ ಲೋಕೇಶ್,ಬಿ.ಕೆ.ಮೋಹನ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ರಹೆನಾ ಫೈರೋಜ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲತಾ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯ ಸೇಲ್ವರಾಜ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಗೀತಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಬಾಲಕೃಷ್ಣ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಹೀದ್‌ಜಾನ್, ಪಂಚಾಯಿತಿ ಲೆಕ್ಕ ಪರಿಶೋಧಕಿ ಚಂದ್ರಕಲಾ, ಸಿಬ್ಬಂದಿ ಸಂಧ್ಯಾ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತಿತರರು ಇದ್ದರು.