ಗಮನ ಸೆಳೆದ ಕೃಷಿ ಚಟುವಟಿಕೆ ಪ್ರಾತ್ಯಕ್ಷಿಕೆ

| Published : Jan 16 2024, 01:47 AM IST

ಸಾರಾಂಶ

ಸಂಕ್ರಾಂತಿಯಲ್ಲಿ ಸೂರ್ಯ ತನ್ನ ಪಥ ಬದಲಾಯಿಸುವಂತೆ ಬದುಕಿನಲ್ಲಿಯೂ ಸಂಕಷ್ಟಗಳ ಪಥ ಬದಲಿಸಲು ಕಾಯಕನಿಷ್ಠೆ ಹೊಂದಬೇಕಿದೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ರೇಣುಕಾ ಕಾಲೇಜಿನಲ್ಲಿ ಸಂಕ್ರಾಂತಿ ಸೊಬಗು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ರೈತಗೀತೆ, ಜಾನಪದ ಹಾಡುಗಳ ನೃತ್ಯ ಪ್ರದರ್ಶನ ವಿಶೇಷ ಗಮನಸೆಳೆದವು.

ಪ್ರೌಢಶಾಲೆ ವಿದ್ಯಾರ್ಥಿಗಳು ಕಣದಲ್ಲಿ ಹೊಲದಲ್ಲಿ ಒಕ್ಕಣೆ, ರಾಶಿ ಕಟ್ಟುವುದು ಸೇರಿ ವಿವಿಧ ಕೃಷಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಂದ ಜಾನಪದ, ಸಂಪ್ರದಾಯಗಳ ಆಚರಣೆಗಳ ಪ್ರದರ್ಶನ ಕಣ್ತುಂಬಿಕೊಳ್ಳುವಂತಿದ್ದವು. ಬೀಸುವ ಪದ, ಕುಟ್ಟುವ ಪದ ಹಾಡಿ ಗಮನ ಸೆಳೆದರು. ಇದೇವೇಳೆ ಗೋಮಾತೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗಿಸಲಾಯಿತು.

ಎಡೆಯೂರು ಸಿದ್ದಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಮಾತನಾಡಿ, ಸಂಕ್ರಾಂತಿಯಲ್ಲಿ ಸೂರ್ಯ ತನ್ನ ಪಥ ಬದಲಾಯಿಸುವಂತೆ ಬದುಕಿನಲ್ಲಿಯೂ ಸಂಕಷ್ಟಗಳ ಪಥ ಬದಲಿಸಲು ಕಾಯಕನಿಷ್ಠೆ ಹೊಂದಬೇಕಿದೆ ಎಂದರು. ಸಂಪನ್ಮೂಲ ವ್ಯಕ್ತಿ ರೊಟ್ಟಿ ಕೊಟ್ರಪ್ಪ ಅವರು ಸಂಕ್ರಾಂತಿ ಸೊಬಗು ಕುರಿತು ಉಪನ್ಯಾಸ ನೀಡಿದರು. ವಿದ್ಯಾಪೀಠದ ಕಾರ್ಯದರ್ಶಿ ಶ್ರೀಗೌರಿ ಗೋಮಾತೆಗೆ ಪೂಜೆ ಸಲ್ಲಿಸಿದರು. ರೇಣುಕಾ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ ಬಾರಕಿ, ಪ್ರೌಢಶಾಲೆ ಮುಖ್ಯಶಿಕ್ಷಕ ಅಕ್ಕಿ ಪ್ರಕಾಶ್, ಉಪನ್ಯಾಸಕರಾದ ಜಯಪ್ರಕಾಶ್, ಚಂದ್ರನಾಯ್ಕ, ಯು. ನಾಗರಾಜ, ದೈಹಿಕ ಶಿಕ್ಷಣ ಶಿಕ್ಷಕರಾದ ಗುರುಬಸವರಾಜ, ಹುಲುಗಪ್ಪ ಇತರರಿದ್ದರು. ಆಡಳಿತಾಧಿಕಾರಿ ಶಂಕ್ರಪ್ಪ, ಉಪನ್ಯಾಸಕ ಬೆಟ್ಟಪ್ಪ, ಶಿಕ್ಷಕ ಬಿ. ಅಶೋಕ್ ನಿರ್ವಹಿಸಿದರು.