ಸಾರಾಂಶ
- ಸಿಂಗಟಗೆರೆಯಲ್ಲಿ ಮೆಕ್ಕೆಜೋಳದ ಸಂಕರಣ ಹೈಬ್ರಿಡ್ಗಳ ಪರಿಚಯ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮೆಕ್ಕೆಜೋಳ ಬೆಳೆಯಲ್ಲಿ ಉತ್ಪಾದಕತೆ ಹೆಚ್ಚಿಸಲು ಮುಳ್ಳುಸಜ್ಜೆ ಕಳೆ ನಿರ್ವಹಣೆ ಮತ್ತು ವಾತಾವರಣದಲ್ಲಿ ಏರುಪೇರಾಗುವ ಪರಿಸ್ಥಿತಿಗೆ ಹಾಗೂ ಬರಗಾಲಕ್ಕೂ ಹೊಂದಿಕೊಂಡು ರೈತರಿಗೆ ಆದಾಯ ತರುವಂತ ಹೊಸ ಹೈಬ್ರಿಡ್ ಬೀಜಗಳನ್ನು ಪರಿಚಯಿಸುವ ಮತ್ತು ಅವುಗಳ ಕಾರ್ಯಕ್ಷಮತೆ ಪರೀಕ್ಷಿಸುವ ಅನಿವಾರ್ಯ ಪರಿಸ್ಥಿತಿಗೆ ಉತ್ತರವಾಗಿ ಶಿವಮೊಗ್ಗದ ವಿ.ವಿ.ಯ ನಿರಂತರ ಪ್ರಯತ್ನದ ಮೊದಲ ಹೆಜ್ಜೆಯ ಪ್ರಾತ್ಯಕ್ಷಿಕೆ- ಕ್ಷೇತ್ರೋತ್ಸವದಲ್ಲಿ ಯಶಸ್ವಿಯಾಗಿದೆ ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ. ದುಷ್ಯಂತಕುಮಾರ್ ಹೇಳಿದರು.ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಶುಕ್ರವಾರ ಕತ್ತಲಗೆರೆಯ ವಿಸ್ತರಣ ಶಿಕ್ಷಣ ಘಟಕ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಪ್ರಾತ್ಯಕ್ಷಿಕೆ- ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಕ್ಷೇತ್ರೋತ್ಸವ ಮಾಡಲು ಕಾರಣ ಮೆಕ್ಕೆಜೋಳದ ಹೊಸ ಐದು ಸಂಕರಣ ಹೈಬ್ರಿಡ್ಗಳ ಪರಿಚಯ. ಸುಮಾರು 15 ಎಕರೆಯಲ್ಲಿ ಉಚಿತವಾಗಿ ಬೀಜಗಳ ವಿತರಣೆ ಮಾಡಿ ಅವುಗಳ ಕಾರ್ಯಕ್ಷಮತೆ ಮತ್ತು ಈ ವಾತಾವರಣದಲ್ಲಿ ಹೊಂದಿಕೊಂಡು ಎಷ್ಟು ಇಳುವರಿ ಕೊಡಬಲ್ಲವು ಎಂದು ಪರೀಕ್ಷಿಸುವ ಹಂತದಲ್ಲಿ ರೈತರನ್ನು ಸಂತೋಷಪಡಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿಸ್ತರಣಾ ಮುಂದಾಳು ಡಾ. ಗಂಗಪ್ಪಗೌಡ ಶಿ. ಬಿರಾದಾರ ಮಾತನಾಡಿ. ಮೆಕ್ಕೆಜೋಳದಲ್ಲಿ ಮುಳ್ಳುಸಜ್ಜೆ ಕಳೆ ನಿರ್ವಹಣೆ ಬಹು ಸ್ಥಳ ಪ್ರಯೋಗ ಕೈಗೊಂಡಿದ್ದು ಕೂಡ ಯಶಸ್ವಿಯಾಗಿದೆ. ಮುಖ್ಯವಾಗಿ ಮೆಕ್ಕೆಜೋಳ ಬೆಳೆ ಹೆಚ್ಚಿನ ಪೋಷಕಾಂಶಗಳನ್ನ ಹೀರಿಕೊಳ್ಳುವುದರಿಂದ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಸೇರಿಸುವ ನಿಟ್ಟಿನಲ್ಲಿ ಅಡಕೆ ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮೆಕ್ಕೆಜೋಳ ಬೆಳೆಯಲ್ಲಿ ಉಪಯೋಗಿಸಿದ ಕ್ಷೇತ್ರದಲ್ಲಿ ಉತ್ತಮ ಬೆಳೆಯ ಬೆಳವಣಿಗೆ. ತುದಿವರೆಗೂ ತೆನೆಯಲ್ಲಿ ಕಾಳುಕಟ್ಟುವಿಕೆ ಮತ್ತು ಹೆಚ್ಚಿನ ಇಳುವರಿ ಪಡೆಯುವಲ್ಲಿ ಸಹಕಾರಿ ಎಂಬುದು ಪ್ರಯೋಗದಲ್ಲಿ ತಿಳಿದುಬಂದಿದೆ. ಹಾಗಾಗಿ, ಈ ಮೂರು ತಂತ್ರಜ್ಞಾನಗಳನ್ನ ರೈತರಿಗೆ ತಿಳಿಸುವ ಸಲುವಾಗಿ ಈ ಕ್ಷೇತ್ರೋತ್ಸವ ಆಯೋಜಿಸಲಾಗಿದೆ ಎಂದರು.ತಿಮ್ಲಾಪುರ ಗ್ರಾಮ ಪಂಚಾಯತಿಯ ಸದಸ್ಯ ಟಿ.ಜಿ.ರಮೇಶಗೌಡ ಅಧ್ಯಕ್ಷತೆ ವಹಿಸಿ, ವಿಜ್ಞಾನಿಗಳು ಗ್ರಾಮಕ್ಕೆ ಬಂದು ಈ ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಇದರ ಸದುಪಯೋಗ ಪಡೆಯೋದು ಮುಖ್ಯ. ಪೂರ್ವ ಮುಂಗಾರಿಗೆ ಮತ್ತೊಂದು ತರಬೇತಿ ಕಾರ್ಯಕ್ರಮಕ್ಕೆ ವಿಜ್ಞಾನಿಗಳ ಕರೆಸಿ ತರಬೇತಿ ಪಡೆಯೋಣ ಎಂದು ಹೇಳಿದರು.
ಈ ಕ್ಷೇತ್ರೋತ್ಸವಕ್ಕೆ ಜಮೀನು ನೀಡಿದ ರೈತ ಸಿಂಗಟಗೆರೆಯ ಕಳ್ಳಲ್ಲಿ ರಾಕೇಶ್ ರಾಜಪ್ಪ ಮಾತನಾಡಿ, ಹೊಸ ಹೈಬ್ರಿಡ್ಗಳಲ್ಲಿ ಧರ್ಮ ಹೈಬ್ರಿಡ್ ಲೋಕಲ್ ಹೈಬ್ರಿಡ್ಕ್ಕಿಂತ ಹೆಚ್ಚಿನ ಇಳುವರಿ ಬರುವ ಎಲ್ಲ ಲಕ್ಷಣಗಳಿವೆ. ಡಾ ಶರಣಪ್ಪ ಕೆ. ಅವರು ಹೇಳಿದ ಹಾಗೆ ಸಿಂಪರಣೆ ಮಾಡಿದಕ್ಕೆ ಮುಳ್ಳುಸಜ್ಜೆ ನಿಯಂತ್ರಣ ಶೇ.90 ನಿರ್ವಹಣೆ ಮಾಡಿದೆ. ಅಡಕೆ ಸಿಪ್ಪೆ ಕಾಂಪೋಸ್ಟ್ ಗೊಬ್ಬರದ ಪರಿಣಾಮ ನೋಡಿ ನಮಗೆ ಈ ಬಾರಿಯಿಂದ ಅಡಕೆ ಸಾವಯವ ಗೊಬ್ಬರ ಭೂಮಿಗೆ ಸೇರಿಸುವಷ್ಟು ಆಸಕ್ತಿ ಬಂದಿದೆ ಎಂದು ಕೃಷಿ ವಿ.ವಿ.ಗೆ ಕೃತಜ್ಞತೆ ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಿ.ಎಂ. ಆನಂದಕುಮಾರ್, ಸಮಗ್ರ ಕೃಷಿ ಬಗ್ಗೆ ಡಾ ಸಣ್ಣತಿಮ್ಮಪ್ಪ, ಅಡಕೆ ಸಿಪ್ಪೆ ಕಾಂಪೋಸ್ಟ್ ಗೊಬ್ಬರ ಬಗ್ಗೆ ಡಾ. ಜಿ.ಎನ್. ತಿಪ್ಪೇಶಪ್ಪ, ಮುಳ್ಳುಸಜ್ಜೆ ನಿರ್ವಹಣೆ ಕುರಿತು ಡಾ.ಶರಣಪ್ಪ ಕೆ., ಇಲಾಖೆ ಯೋಜನೆ ಕುರಿತು ಕುಂದೂರು ರೈತ ಸಂಪರ್ಕ ಕೇಂದ್ರದ ಡಾ. ಮಾಲತೇಶ ಕೃಷಿ ಅಧಿಕಾರಿ, ಡಾ. ಅಭಿಜಿತ್ ಚವ್ಙಾಣ್, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಮೆಕ್ಕೆಜೋಳದ ಕೀಟ ಮತ್ತು ರೋಗ ನಿರ್ವಹಣೆ ಕುರಿತು ರೈತರ ಉದ್ದೇಶಿಸಿ ಮಾತನಾಡಿದರು.
- - --18ಎಚ್.ಎಲ್.ಐ1:
ಕಾರ್ಯಕ್ರಮವನ್ನು ಡಾ. ಬಿ.ಎಂ. ದುಷ್ಯಂತಕುಮಾರ್ ಉದ್ಘಾಟಿಸಿದರು.