ದಲಿತರ ಮನೆಯೂಟ ನಿರಾಕರಣೆ: ಅಧಿಕಾರಿಗಳ ವಿರುದ್ಧ ದೂರು

| Published : Apr 30 2024, 02:00 AM IST

ಸಾರಾಂಶ

ಮತಗಟ್ಟೆಯಲ್ಲಿ ಇದ್ದ ಅಧಿಕಾರಿಗಳು ಉಪನ್ಯಾಸಕರು, ಶಿಕ್ಷಕರು ಇದ್ದರು. ಇವರೇ ಅಸ್ಪೃಶ್ಯತೆಯನ್ನು ಪ್ರದರ್ಶಿಸಿದ್ದಾರೆ. ಇಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ

ಕನ್ನಡಪ್ರಭ ವಾರ್ತೆ ಟೇಕಲ್

ಲೋಕಸಭಾ ಚುನಾವಣೆ ಮತಗಟ್ಟೆ ಕೇಂದ್ರದಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಬಂದು ತದನಂತರ ಗ್ರಾಮದ ಮುಖಂಡರೊಬ್ಬರಿಗೆ ಸಂಪ್ರದಾಯದಂತೆ ಎಲ್ಲರಿಗೂ ರಾತ್ರಿ ಊಟಕ್ಕೆ ಹೇಳಿ ಇನ್ನೇನು ಊಟ ಮಾಡುವ ಸಮಯಕ್ಕೆ ಅವರು ದಲಿತರೆಂದು ತಿಳಿದು ಊಟ ಮಾಡದೆ ಅನ್ನವನ್ನು ಆಚೆ ಹಾಕಿದ್ದಾರೆ. ಅಲ್ಲದೆ ಕುಟುಂಬಕ್ಕೆ ಅವಮಾನವೆಸಗಿದ ಘಟನೆ ಟೇಕಲ್‌ನ ಬಂಡೂರು ಅಗ್ರಹಾರದ ಮತಗಟ್ಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟೇಕಲ್‌ನ ಬಂಡೂರು ಅಗ್ರಹಾರದ ಗ್ರಾಮದ ಹಾಗೂ ರೇಣುಕಾ ಯಲ್ಲಮ್ಮ ಬಳಗದ ಕೋಲಾರ ಜಿಲ್ಲಾಧ್ಯಕ್ಷ, ದಲಿತ ಮುಖಂಡ ಡಾ.ಪಿ.ನಾರಾಯಣಸ್ವಾಮಿಯವರ ಮನೆಯಿಂದ ತಂದ ಊಟವನ್ನು ಚುನಾವಣೆ ಕೆಲವು ಅಧಿಕಾರಿಗಳು ಬೇಡವೆಂದು ತಮ್ಮ ಮತದಾನ ಕೇಂದ್ರದಿಂದ ಕಿಟಕಿ ಆಚೆಗೆ ಅನ್ನವನ್ನು ಬಿಸಾಡಿದ್ದಾರೆಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ನಡೆದ ಶುಕ್ರವಾರ ಮತಗಟ್ಟೆಗೆ ಅಧಿಕಾರಿಗಳು ಬಂದಾಗ ಸ್ಥಳೀಯ ಕಂದಾಯ ಅಧಿಕಾರಿಗಳು ಬಂದಾಗ ಅವರ ಬಳಿ ಹೋಗಿ ನನ್ನ ಪರಿಚಯ ಮಾಡಿಕೊಂಡು ಊಟದ ವ್ಯವಸ್ಥೆ ಮಾಡುವುದಾಗಿ ಹೇಳಿದಾಗ ಎಲ್ಲರೂ ಒಪ್ಪಿಕೊಂಡರು. ನಂತರ ಅಡುಗೆಯಾದ ಮೇಲೆ ರಾತ್ರಿ ೭.೩೦ ಗಂಟೆಗೆ ಹೋಗಿ ತಮ್ಮ ಮಗ ಅಡುಗೆ ಬಡಿಸಲು ಮುಂದಾದಾಗ ನಮಗೆ ಮನೆಯ ಊಟ ಬೇಡ ಎಲ್ಲಾದರೂ ಹೋಟೆಲ್‌ನಲ್ಲಿ ತಂದು ಕೊಡಿ ಎಂದು ಹೇಳಿದ್ದಾಗಿ ತಿಳಿಸಿದರು.

ನಾನು ದಲಿತನೆಂದು ತಿಳಿದು ನಮ್ಮ ಮನೆಯ ಊಟವನ್ನು ಆಚೆಗೆ ಎಸೆದಿದ್ದಾರೆ ಎಂದು ಆರೋಪಿಸಿದರು. ಮತಗಟ್ಟೆಯಲ್ಲಿ ಇದ್ದ ಅಧಿಕಾರಿಗಳು ಉಪನ್ಯಾಸಕರು, ಶಿಕ್ಷಕರು ಇದ್ದರು. ಇವರೇ ಅಸ್ಪೃಶ್ಯತೆಯನ್ನು ಪ್ರದರ್ಶಿಸಿದ್ದಾರೆ. ಇಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಈ ಎಲ್ಲಾ ವಿಷಯವನ್ನು ಲಿಖಿತ ಮೂಲಕ ಚುನಾವಣೆ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ರಿಗೆ ಮನವಿ ಮಾಡಿರುವುದಾಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ದೂರಿನಲ್ಲಿ ಪಿಆರ್‌ಒ ಚಂದ್ರಮೋಹನ್‌ರೆಡ್ಡಿ, ಎಆರ್‌ಒ ವೆಂಕಟೇಶ್ ಮತ್ತು ಉಷಾದೇವಿ ಯವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಮನವಿ ಪತ್ರ ನೀಡುವಾಗ ಶಿವಣ್ಣ, ಹುಣಸಿಕೋಟೆ ಬಾಬು, ಸೀನಪ್ಪ, ಈರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.